ಹಾಜಿಪುರ, ಬಿಹಾರ (ಪಿಟಿಐ): ‘ವೇಗವಾಗಿ ಬಂದ ಟ್ರಕ್ವೊಂದು ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಹರಿದಿದ್ದು, ಘಟನೆಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಒಂಬತ್ತು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ’ ಎಂದು ಆರ್ಜೆಡಿ ಶಾಸಕ ಮುಕೇಶ್ ರೌಷನ್ ಹೇಳಿದ್ದಾರೆ.
‘ಮೃತರಲ್ಲಿ ನಾಲ್ವರು ಮಕ್ಕಳಿದ್ದಾರೆ. ಟ್ರಕ್ನ ಚಾಲಕ ಕೂಡ ಅಸು ನೀಗಿದ್ದಾನೆ. ಟ್ರಕ್ ಸಂಪೂರ್ಣವಾಗಿ ಜಖಂಗೊಂಡಿದ್ದು ಅದರಲ್ಲಿ ಆತನ ಮೃತದೇಹ ಸಿಲುಕಿಕೊಂಡಿದೆ’ ಎಂದು ವೈಶಾಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮನೀಷ್ ಕುಮಾರ್ ತಿಳಿಸಿದ್ದಾರೆ.