ಬಲಿಯಾ (ಉತ್ತರಪ್ರದೇಶ): ಕೊಲೆ ಪ್ರಕರಣದ ಪ್ರಮುಖ ಆರೋಪಿ, ಸ್ಥಳೀಯ ಬಿಜೆಪಿ ನಾಯಕ ಧಿರೇಂದ್ರ ಪ್ರತಾಪ್ ಸಿಂಗ್ ಅವರನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಧಿರೇಂದ್ರ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಆದರೆ ಈವರೆಗೆ ಯಾವುದೇ ಜಾಮೀನು ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಧಿರೇಂದ್ರ ಪರ ವಕೀಲ ಹರಿವಂಶ್ ಸಿಂಗ್ ಅವರು ಹೇಳಿದರು.
ಬಲಿಯಾದ ರಿಯೋಟಿ ಪ್ರದೇಶದ ದುರ್ಜನ್ಪುರ ಗ್ರಾಮದಲ್ಲಿ ಪಡಿತರ ಅಂಗಡಿಗಳ ಹಂಚಿಕೆ ವಿಷಯದಲ್ಲಿ ಧಿರೇಂದ್ರ ಪ್ರತಾಪ್ ಸಿಂಗ್ ಮತ್ತು ಜೈ ಪ್ರಕಾಶ್ ಪಾಲ್ ಗಾಮಾ (46) ಅವರಿಬ್ಬರ ನಡುವೆ ಗುರುವಾರ ಜಗಳ ನಡೆದಿತ್ತು. ಈ ವೇಳೆ ಧಿರೇಂದ್ರ, ಜೈ ಪ್ರಕಾಶ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಪ್ರಕರಣ ಸಂಬಂಧ ಲಖನೌದಲ್ಲಿ ಧಿರೇಂದ್ರ ಸಿಂಗ್ ಅವರನ್ನುಉತ್ತರ ಪ್ರದೇಶ ವಿಶೇಷ ಪೊಲೀಸ್ ಪಡೆ ಭಾನುವಾರ ಬಂಧಿಸಿದೆ. ಆದರೆ, ವಿಚಾರಣೆ ವೇಳೆ ಧೀರೇಂದ್ರ ಅವರು, ತಾನು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.