ನವದೆಹಲಿ: ಸಂತ್ರಸ್ತೆಯನ್ನು ವಿವಾಹವಾಗುತ್ತೀರಾ ಎಂಬುದಾಗಿ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪ್ರಶ್ನಿಸಿದ್ದ ಸುಪ್ರೀಂಕೋರ್ಟ್ನ ನ್ಯಾಯಪೀಠದ ಬೆಂಬಲಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ನಿಂತಿದೆ.
‘ಆರೋಪಿಯನ್ನು ಉದ್ದೇಶಿಸಿ ಆಡಿರುವ ಮಾತುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರಿಗೆ ಪತ್ರ ಬರೆದಿರುವ ಕಾರ್ಯಕರ್ತರು ಈ ವಿಷಯವನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ಗೆ ಅಪವಾದ ಕೊಡುವುದನ್ನು ನಿಲ್ಲಿಸಬೇಕು’ ಎಂದು ಬಿಸಿಐ ಹೇಳಿದೆ.
‘ಸುಪ್ರೀಂಕೋರ್ಟ್ನ ಕಲಾಪಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುವ ಯತ್ನ ಬೇಡ’ ಎಂದು ಗುರುವಾರ ನಡೆದ ಬಿಸಿಐನ ಸಭೆಯಲ್ಲಿ ಅಂಗೀಕರಿಸಿರುವ ನಿರ್ಣಯದಲ್ಲಿ ಹೇಳಲಾಗಿದೆ.
‘ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರು ಸಿಜೆಐ ಅವರಿಗೆ ಬರೆದಿರುವ ಪತ್ರ ನ್ಯಾಯಾಂಗದ ಮೇಲೆ ಮಾಡಿರುವ ದುರುದ್ದೇಶಪೂರಿತ ದಾಳಿ. ಒಂದು ಸಂಸ್ಥೆಗೆ ಮಸಿ ಬಳಿಯಲು, ಅದನ್ನು ದುರ್ಬಲಗೊಳಿಸಲು ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬಾರದು’ ಎಂದೂ ನಿರ್ಣಯದಲ್ಲಿ ಹೇಳಲಾಗಿದೆ.