ಪಟ್ನಾ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕು ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಆಗ್ರಹಿಸಿದ್ದಾರೆ.
‘ಕೊರೊನಾದಿಂದಾಗಿ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ, ಚುನಾವಣೆಯನ್ನು ಮುಂದೂಡಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಿದರೆ ಎಲ್ಲಾ ಮತಗಟ್ಟೆಗಳು ಕೊರೊನಾ ಕೇಂದ್ರಗಳಾಗಿ ಬದಲಾಗಬಹುದು. ಆಗ ಕೊರೊನಾ ಎಷ್ಟು ಪ್ರಮಾಣದಲ್ಲಿ ಹರಡಿದೆ ಎಂಬುದನ್ನು ಅಂದಾಜಿಸುವುದು ಬಹಳ ಕಷ್ಟವಾಗಲಿದೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಬಾರದು’ ಎಂದು ಅವರು ಹೇಳಿದರು.
‘ಬಿಹಾರ ಸರ್ಕಾರವು ಚುನಾವಣಾ ಆಯೋಗದ ಮುಂದೆ ಪ್ರಕರಣಗಳು ಕಡಿಮೆಯಿದೆ ಎಂದು ತೋರಿಸಲು ನಿಜವಾದ ಅಂಕಿಅಂಶಗಳನ್ನು ಮುಚ್ಚುಮರೆ ಮಾಡುತ್ತಿದೆ. ಒಂದು ವೇಳೆ ನ.29ರ ಬಳಿಕ ಚುನಾವಣೆ ನಡೆದರೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬಹುದು. ಆಗ ತಾನು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ ಎಂದುನಿತೀಶ್ ಕುಮಾರ್ ಭಯಪಡುತ್ತಿದ್ದಾರೆ’ ಎಂದು ಅವರು ದೂರಿದರು.
ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ, ಚುನಾವಣಾ ಆಯೋಗವು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಬಿಹಾರದಲ್ಲಿ ಈವರೆಗೆ 1.15 ಲಕ್ಷ ಮಂದಿಯಲ್ಲಿ ಕೊರೊನಾ ಧೃಡಪಟ್ಟಿದ್ದು, 547 ಮಂದಿ ಮೃತಪಟ್ಟಿದ್ದಾರೆ.