ನವದೆಹಲಿ (ಪಿಟಿಐ): ‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ‘ಐ ಲವ್ ಮನೀಷ್ ಸಿಸೋಡಿಯಾ’ ಬರಹವುಳ್ಳ ಡೆಸ್ಕ್ಗಳನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿದೆ. ಆ ಮೂಲಕ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಸಿಸೋಡಿಯಾ ಅವರಿಗೆ ಮಕ್ಕಳ ಮೂಲಕ ಬೆಂಬಲ ಕೊಡಿಸಲು ಮುಂದಾಗಿದೆ’ ಎಂದು ಬಿಜೆಪಿ ದೆಹಲಿ ಘಟಕವು ಶುಕ್ರವಾರ ಆರೋಪಿಸಿದೆ.
‘ಸಿಸೋಡಿಯಾ ಬಂಧನದ ಬಳಿಕವೂ ದೆಹಲಿ ಸರ್ಕಾರವು ತನ್ನ ಕೊಳಕು ರಾಜಕೀಯ ನಿಲ್ಲಿಸುತ್ತಿಲ್ಲ. ಸಿಸೋಡಿಯಾಗೆ ಬೆಂಬಲ ನೀಡುವ ಅಭಿಯಾನದಲ್ಲಿ ಶಾಲೆಯ ಮುಗ್ಧ ಮಕ್ಕಳನ್ನು ತೊಡಗಿಸಿಕೊಂಡಿದೆ. ಆ ಮೂಲಕ ಇನ್ನಷ್ಟು ಕೆಳಮಟ್ಟಕ್ಕೆ ಇಳಿದಿದೆ’ ಎದು ಪಕ್ಷದ ವಕ್ತಾರ ಪ್ರವೀಣ್ ಶಂಕರ್ ಕಪೂರ್ ದೂರಿದ್ದಾರೆ.
ಬಿಜೆಪಿಯ ಈ ಆರೋಪವನ್ನು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ತಳ್ಳಿಹಾಕಿದೆ. ‘ಈ ಅಭಿಯಾನದಲ್ಲಿ ದೆಹಲಿ ಸರ್ಕಾರ, ಯಾವುದೇ ಇಲಾಖೆ ಅಥವಾ ಉದ್ಯೋಗಿಯ ಪಾತ್ರವಿಲ್ಲ. ಇದು ಬಿಜೆಪಿಯ ಕಾರ್ಯಸೂಚಿ’ ಎಂದು ದೆಹಲಿ ಸರ್ಕಾರದ ಪ್ರಕಟಣೆ ತಿಳಿಸಿದೆ.