ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಎರಡು ಬಾರಿ ಸಿಎಂ ಬದಲಾಗಲು ಅರ್ಚಕರ ಶಾಪ ಕಾರಣ: ದೇಗುಲ ಸಮಿತಿ

Last Updated 6 ಜುಲೈ 2021, 15:20 IST
ಅಕ್ಷರ ಗಾತ್ರ

ಉತ್ತರಕಾಶಿ: ಉತ್ತರಾಖಂಡದಲ್ಲಿ ಬಿಜೆಪಿಯು ಎರಡು ಬಾರಿ ಮುಖ್ಯಮಂತ್ರಿ ಬದಲಾವಣೆ ಮಾಡುವಂತಾಗಲು ಅರ್ಚಕರ ಶಾಪ ಕಾರಣ ಎಂದು ‘ಗಂಗೋತ್ರಿ ಮಂದಿರ್ ಸಮಿತಿ’ ಹೇಳಿದೆ.

‘ದೇವಸ್ಥಾನಂ ಮಂಡಳಿ’ಯನ್ನು ವಿಸರ್ಜಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿರುವುದೇ ಅರ್ಚಕರ ಶಾಪಕ್ಕೆ ಕಾರಣ. ಮಂಡಳಿಯನ್ನು ವಿಸರ್ಜಿಸದಿದ್ದಲ್ಲಿ ಮುಂದಿನ ವರ್ಷ ಬಿಜೆಪಿಗೆ ಮರಳಿ ಅಧಿಕಾರ ದೊರೆಯದು ಎಂದು ಸಮಿತಿಯ ಜಂಟಿ ಕಾರ್ಯದರ್ಶಿ ರಾಜೇಶ್ ಸೆಮ್‌ವಾಲ್ ಹೇಳಿದ್ದಾರೆ.

ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿದ್ದಾಗ ‘ದೇವಸ್ಥಾನಂ ಮಂಡಳಿ’ಯನ್ನು ರಚಿಲಾಗಿತ್ತು. ಉತ್ತರಾಖಂಡದ 51 ದೇಗುಲಗಳು ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿವೆ.

‘ದೇವಸ್ಥಾನಂ ಮಂಡಳಿ’ ರಚನೆಯು ತಮ್ಮ ಹಕ್ಕುಗಳ ಮೇಲಿನ ಅತಿಕ್ರಮಣ ಎಂದು ಭಾವಿಸಿರುವ ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಅರ್ಚಕರು ಮಂಡಳಿಯನ್ನು ವಿಸರ್ಜಿಸಬೇಕೆಂದು ಕಳೆದ ಹಲವು ವಾರಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

‘ಅರ್ಚಕರ ಶಾಪದಿಂದಾಗಿ ಬಿಜೆಪಿ ಸರ್ಕಾರವು ನಾಲ್ಕೂವರೆ ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಗಿದೆ. ಈ ಅನುಭವದಿಂದ ಪಾಠ ಕಲಿತು ನೂತನ ಮುಖ್ಯಮಂತ್ರಿಗಳು ಮಂಡಳಿಯನ್ನು ವಿಸರ್ಜಿಸದಿದ್ದರೆ ಬಿಜೆಪಿಗೆ 2022ರಲ್ಲಿ ಮರಳಿ ಅಧಿಕಾರ ದೊರೆಯದು’ ಎಂದು ರಾಜೇಶ್ ಹೇಳಿದ್ದಾರೆ.

ರಾಜ್ಯ ವಿಧಾನಸಭೆಗೆ ನಿಗದಿತ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗುವ ಸಾಧ್ಯತೆ ಇಲ್ಲದ ಕಾರಣ ಇತ್ತೀಚೆಗೆ ಮುಖ್ಯಮಂತ್ರಿ ತೀರಥ್ ಸಿಂಗ್‌ ರಾವತ್‌ ಅವರು ರಾಜೀನಾಮೆ ಸಲ್ಲಿಸಿದ್ದರು. ಬಳಿಕ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಅಧಿಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT