ಕೋಲ್ಕತ್ತ: ಬಿಜೆಪಿಯವರಿಗೆ ಪಶ್ಚಿಮ ಬಂಗಾಳದಲ್ಲಿ ‘ರಥಯಾತ್ರೆ‘ ನಡೆಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿಲ್ಲ. ಆದರೂ, ಆ ಪಕ್ಷದವರು ಸರ್ಕಾರದ ವಿರುದ್ಧ ದುರುದ್ದೇಶಪೂರಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್(ಎಐಟಿಸಿ) ಟ್ವಿಟರ್ನಲ್ಲಿ ಆರೋಪಿಸಿದೆ.
‘ರಥಯಾತ್ರೆಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿರುವ ಬಗ್ಗೆ ಬಿಜೆಪಿಯವರು ಪುರಾವೆಗಳನ್ನು ಒದಗಿಸಬೇಕು‘ ಎಂದು ಎಐಟಿಸಿ ಒತ್ತಾಯಿಸಿದೆ. ‘ಇದು ಟಿಎಂಸಿಯನ್ನು ಬಲಿಪಶು ಮಾಡುವ ಬಿಜೆಪಿಯ ಪ್ರಯತ್ನ‘ ಎಂದು ಎಐಟಿಸಿ ಮೈಕ್ರೋಬ್ಲಾಗಿಂಗ್ ಜಾಲತಾಣದಲ್ಲಿ ತಿಳಿಸಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ರಾಜ್ಯದಾದ್ಯಂತ ರಥಯಾತ್ರೆಗಳನ್ನು ಆಯೋಜಿಸಲು ಬಿಜೆಪಿ ನಿರ್ಧರಿಸಿದೆ.
ಪಶ್ಚಿಮ ಬಂಗಾಳದಲ್ಲಿ ‘ರಥಯಾತ್ರೆ‘ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಬಿಜೆಪಿ ಈ ಹಿಂದೆ ಆರೋಪಿಸಿತ್ತು. ಈ ಹೇಳಿಕೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದೆ.