ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ವಕ್ತಾರ ಸೈಯದ್ ಶಹನವಾಜ್ ಹುಸೇನ್ ಅವರನ್ನು ಬಿಜೆಪಿ, ಬಿಹಾರ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಇದರೊಂದಿಗೆ ಶಹನವಾಜ್ ಅವರು ಮತ್ತೆ ಚುನಾವಣಾ ಕಣಕ್ಕೆ ಧುಮುಕಿದಂತಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಭಾಗಲ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅವರಿಗೆ 2019ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು.
ಶಹನವಾಜ್ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಖಾತೆಯ ಸಚಿವರಾಗಿ ಕೆಲಸ ಮಾಡಿದ್ದರು.
ಮತ್ತೆ ಆರು ಮಂದಿಯ ಹೆಸರು ಘೋಷಣೆ: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನ ಪರಿಷತ್ ಚುನಾವಣೆಗೆ ಮತ್ತೆ ಆರು ಮಂದಿ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಶನಿವಾರ ಪ್ರಕಟಿಸಿದೆ.
ಕುನ್ವಾರ್ ಮನ್ವೇಂದ್ರ ಸಿಂಗ್, ಗೋವಿಂದ ನಾರಾಯಣ ಶುಕ್ಲಾ, ಸಲೀಲ್ ಬಿಷ್ಣೋಯಿ, ಅಶ್ವಿನಿ ತ್ಯಾಗಿ, ಧರಮವೀರ್ ಪ್ರಜಾಪತಿ ಮತ್ತು ಸುರೇಂದ್ರ ಚೌಧರಿ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ಚುನಾವಣೆಯು ಇದೇ ತಿಂಗಳ 28ರಂದು ನಿಗದಿಯಾಗಿದೆ.