ರಾಯಪುರ: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕಾಗಿ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಅವರ ವಿರುದ್ಧ ರಾಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಸರ್ವ ಬ್ರಾಹ್ಮಣ ಸಮಾಜ’ ನೀಡಿದ ದೂರಿನ ಮೇರೆಗೆ ಶನಿವಾರ ರಾತ್ರಿ ನಂದ ಕುಮಾರ್ (75) ಅವರ ವಿರುದ್ಧ ಡಿ.ಡಿ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಬ್ರಾಹ್ಮಣರು ವಿದೇಶಿಯರು. ಹೀಗಾಗಿ, ಬ್ರಾಹ್ಮಣರನ್ನು ಬಹಿಷ್ಕರಿಸಬೇಕು. ಹಳ್ಳಿಗಳಲ್ಲಿಯೂ ಅವರಿಗೆ ಪ್ರವೇಶ ನೀಡಬಾರದು’ ಎಂದು ನಂದಕುಮಾರ್ ಜನರಿಗೆ ಕರೆ ನೀಡಿದ್ದಾರೆ ಎಂದು ’ಸರ್ವ ಬ್ರಾಹ್ಮಣ ಸಮಾಜ’ ದೂರಿದೆ.
ಜತೆಗೆ, ಭಗವಾನ ರಾಮ ಬಗ್ಗೆಯೂ ನಂದಹಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಈ ಸಂಘಟನೆ ಆರೋಪಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 153–ಎ ( ಎರಡು ಗುಂಪುಗಳ ನಡುವೆ ದ್ವೇಷ ಬೆಳೆಸಲು ಪ್ರಚೋದನೆ ನೀಡುವುದು), 505(1)(ಬಿ) (ಸಾರ್ವಜನಿಕರಲ್ಲಿ ಭಯ ಸೃಷ್ಟಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.