ನವದೆಹಲಿ:‘ತಮಗೆ ಬೇಕಾದ ರೀತಿಯಲ್ಲಿ ತೀರ್ಪು ಬರದೇ ಇದ್ದಾಗ ನ್ಯಾಯಾಧೀಶರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆದರಿಸುವ ಧೋರಣೆ ಹೆಚ್ಚಾಗುತ್ತಿದೆ. ಇದು ಅತ್ಯಂತ ಗಂಭೀರ ವಿಚಾರ. ಬೆದರಿಕೆಗಳ ಬಗ್ಗೆ ದೂರು ನೀಡಿದರೂಗುಪ್ತಚರ ಇಲಾಖೆ (ಐಬಿ)ಮತ್ತು ಸಿಬಿಐ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಈ ವರ್ತನೆ ಬದಲಾಗಬೇಕು’ ಎಂದು ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವುಜಾರ್ಖಂಡ್ನ ಧನಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉತ್ತಮ್ ಆನಂದ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ. ಈ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಶುಕ್ರವಾರ ಹೀಗೆ ಹೇಳಿದೆ.
ನ್ಯಾಯಾಧೀಶರಿಗೆ ಬೆದರಿಕೆ ಒಡ್ಡುತ್ತಿರುವ ಸಂಬಂಧ 2019ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನೂ ಪೀಠವು ಮತ್ತೆ ಕೈಗೆತ್ತಿಕೊಂಡಿದೆ. ಆ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಈವರೆಗೆ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಪೀಠವುಅಸಮಾಧಾನ ವ್ಯಕ್ತಪಡಿಸಿದೆ.
ಉತ್ತಮ್ ಆನಂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಸಿಬಿಐಗೆ ನೋಟಿಸ್ ನೀಡಿದೆ. ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳಿಗೆ ಒದಗಿಸಿರುವ ಭದ್ರತೆ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
‘ಕೈತೊಳೆದುಕೊಂಡಿರಿ ಅಲ್ಲವೇ?’
‘ಪ್ರಕರಣದ ತನಿಖೆ ನಡೆಸಲು ನೀವು ಎಸ್ಐಟಿ ರಚಿಸಿದಿರಿ. ಆನಂತರ ಸಿಬಿಐಗೆ ತನಿಖೆ ಹಸ್ತಾಂತರಿಸಿ, ಪ್ರಕರಣದಿಂದ ನಿಮ್ಮ ಕೈತೊಳೆದುಕೊಂಡಿರಿ ಅಲ್ಲವೇ?’ ಎಂದು ಜಾರ್ಖಂಡ್ ಅಡ್ವೊಕೇಟ್ ಜನರಲ್ ರಾಜೀವ್ ರಂಜನ್ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಧನಬಾದ್ ಮ್ಯಾಜಿಸ್ಟ್ರೇಟ್ ಉತ್ತಮ್ ಆನಂದ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ಪ್ರಶ್ನಿಸಿದ ರೀತಿ ಇದು.
ರಾಜ್ಯದಲ್ಲಿ ನ್ಯಾಯಾಧೀಶರಿಗೆ ನೀಡಿರುವ ಭದ್ರತೆ ಬಗ್ಗೆ ವರದಿ ನೀಡಿ ಎಂದು ರಾಜೀವ್ ರಂಜನ್ ಅವರಿಗೆ ಪೀಠವು ಸೂಚಿಸಿದೆ.
***
ನ್ಯಾಯಾಧೀಶರಿಗೆ ಬೆದರಿಕೆ ಬರುತ್ತಿರುವುದುಅತ್ಯಂತ ಗಂಭೀರವಾದ ವಿಚಾರ. ನಿಮ್ಮ ಸರ್ಕಾರವು ಈ ಬಗ್ಗೆಯೂ ಸ್ವಲ್ಪ ಆಸಕ್ತಿ ವಹಿಸಿದರೆ ಒಳ್ಳೆಯದಾಗುತ್ತದೆ
-ಸುಪ್ರೀಂ ಕೋರ್ಟ್
***
ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುತ್ತಿರುವ ನ್ಯಾಯಾಧೀಶರು ಬೆದರಿಕೆಗೆ ಗುರಿಯಾಗುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಲು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಬೇಕಿದೆ
-ಕೆ.ಕೆ.ವೇಣುಗೋಪಾಲ್, ಅಟಾರ್ನಿ ಜನರಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.