ನವದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ತಂದೆ ಹಾಗೂ ಸಹೋದರಗೆ ಕೇಂದ್ರ ಗೃಹ ಸಚಿವಾಲಯ ‘ವೈ–ಪ್ಲಸ್’ ಭದ್ರತೆಯನ್ನು ಒದಗಿಸಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಸುವೇಂದು ಅವರ ತಂದೆ ಶಿಶಿರ್ ಕುಮಾರ್ ಅಧಿಕಾರಿ, ಸಹೋದರ ದಿವ್ಯೇಂದು ಅಧಿಕಾರಿ ಅವರಿಗೆ ಬೆದರಿಕೆ ಇರುವುದಾಗಿ ಕೇಂದ್ರದ ಭದ್ರತಾ ಸಂಸ್ಥೆಗಳು ವರದಿ ನೀಡಿದ್ದವು. ಈ ವರದಿಯ ಆಧಾರದಲ್ಲಿ ಅವರಿಗೆ ಭದ್ರತೆಯನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಶಿಶಿರ್ಕುಮಾರ್ ಅಧಿಕಾರಿ ಹಾಗೂ ದಿವ್ಯೇಂದು ಅಧಿಕಾರಿ ಸಂಸದರಾಗಿದ್ದು, ಕ್ರಮವಾಗಿ ಕಾಂತಿ ಹಾಗೂ ತಾಮ್ಲೂಕ್ ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ ಅವರಿಗೆ ಈಗಾಗಲೇ ‘ಝಡ್’ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.