ಇಂದೋರ್: ‘ದೊಡ್ಡ ವ್ಯಕ್ತಿಗಳಿಗೆ‘ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ ‘ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳು ಕರೆ ನೀಡಿರುವ ‘ಭಾರತ್ಬಂದ್‘ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕೇಂದ್ರದ ಕಾಯ್ದೆಗಳ ವಿರುದ್ಧ ಕಿಡಿ ಕಾರಿದರು.
‘ರೂಪಾಯಿ ಅಪಮೌಲ್ಯೀಕರಣ ಮತ್ತು ಜಿಎಸ್ಟಿ ಅನುಷ್ಠಾನದ ನಂತರ ಮೋದಿ ಸರ್ಕಾರ, ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕೃಷಿ ಕ್ಷೇತ್ರಕ್ಕೆ ಅಪಾಯವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ‘ ಎಂದು ದೂರಿದೆ.
‘ಹೊಸ ಕಾಯ್ದೆಗಳನ್ನು ರದ್ದುಗೊಳಿಸಬೇಕು‘ ಎಂದು ಒತ್ತಾಯಿಸಿದ ದಿಗ್ವಿಜಯ್ ಸಿಂಗ್, ‘ಈ ಸಮಸ್ಯೆಯನ್ನು ಬಗೆಹರಿಸಲು ‘ಜಂಟಿ ಸದನ ಸಮಿತಿ‘ಯನ್ನು ರಚಿಸಬೇಕು. ರೈತರ ಮುಖಂಡರು ಮತ್ತು ಜಂಟಿ ಸದನ ಸಮಿತಿ ಸದಸ್ಯರೊಂದಿಗೆ ಚರ್ಚಿಸಬೇಕು‘ ಎಂದು ಪ್ರಧಾನಿಯವರನ್ನು ಒತ್ತಾಯಿಸಿದರು.