ದಾಂತೇವಾಡ: ‘ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಮೂವರು ನಕ್ಸಲರು ಶರಣಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
‘ಈ ಮೂವರು 2015ರಿಂದ ದಾಂತೇವಾಡ ಮತ್ತು ಸುಕ್ಮಾ ಜಿಲ್ಲೆಯಲ್ಲಿ ಐಇಡಿ ಸ್ಫೋಟ, ರಸ್ತೆ, ಸೇತುವೆಗಳಿಗೆ ಹಾನಿ ಮತ್ತು ನಕ್ಸಲರ ಕುರಿತಾಗಿ ಪೋಸ್ಟರ್ಗಳನ್ನು ಹಾಕುವ ಕಾರ್ಯಗಳಲ್ಲಿ ತೊಡಗಿದ್ದರು’ ಎಂದು ಅವರು ಹೇಳಿದರು.
‘ತಾವು ಮಾವೋವಾದಿಗಳ ತತ್ವಗಳಿಂದ ಬೇಸರಗೊಂಡು ಶರಣಾಗಿದ್ದೇವೆ. ಅಲ್ಲದೆ ‘ಲೋನ್ ವರೋತ್ತು’ (ಮರಳಿ ಮನೆಗೆ) ಅಭಿಯಾನವು ನಮ್ಮನ್ನು ಹಿಂಸೆಯನ್ನು ತೊರೆಯುವಂತೆ ಪ್ರೇರಿಪಿಸಿತು’ ಎಂದು ನಕ್ಸಲರು ಹೇಳಿರುವುದಾಗಿ ದಾಂತೇವಾಡದ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಅವರು ಮಾಹಿತಿ ನೀಡಿದರು.
‘ಅಯತಾ ಕೊರ್ಹಮಿ, ಉಯಿಕಾ ಸೋಮದು ಮತ್ತು ಕಾರ್ತಮ್ ಮಹೇಂದ್ರ ಪೊಲೀಸರಿಗೆ ಶರಣಾಗಿದ್ದಾರೆ.ಇದರಲ್ಲಿ ಅಯತಾ ಕೊರ್ಹಮಿ ಪತ್ತೆಗಾಗಿ ಸರ್ಕಾರವು ₹1 ಲಕ್ಷ ನಗದು ಪುರಸ್ಕಾರ ಘೋಷಿಸಿತ್ತು. ಈತ 2018ರಲ್ಲಿ ನಡೆದಿದ್ದ ಕೊಲೆಯೊಂದರ ಪ್ರಕರಣದ ಆರೋಪಿಯೂ ಆಗಿದ್ದಾನೆ’ ಎಂದು ಅವರು ಹೇಳಿದರು.