ಚೆನ್ನೈ: ತಮಿಳುನಾಡಿನ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಪಕ್ಷದಲ್ಲಿ ನಾಯಕತ್ವ ತಿಕ್ಕಾಟದ ನಡುವೆ ಎರಡೂ ಬಣಗಳ ಬೆಂಬಲಿಗರ ನಡುವೆ ಪಕ್ಷದ ಪ್ರಧಾನ ಕಚೇರಿಯ ಹೊರಗಡೆ ಸೋಮವಾರ ಘರ್ಷಣೆ ನಡೆದಿದೆ.
ಪಕ್ಷದ ಬಾವುಟ ಹಿಡಿದಿರುವ ಎರಡು ಬಣಗಳ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿರುವ ವಿಡಿಯೊಗಳನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಈ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪಕ್ಷದ ಕಚೇರಿ ಪಕ್ಕದಲ್ಲಿ ನಿಲ್ಲಿಸಿದ್ದ ಕೆಲ ವಾಹನಗಳು ಸಹ ಜಖಂ ಆಗಿವೆ.
ಕೆಲವರು ಬ್ಯಾರಿಕೇಡ್ ಮುರಿದು ಪಕ್ಷದ ಕಚೇರಿ ಪ್ರವೇಶಿಸಿರುವುದನ್ನೂ ಪ್ರಸಾರ ಮಾಡಲಾಗಿದೆ. ಬಳಿಕ, ಕಚೇರಿ ಸುತ್ತ ಭದ್ರತೆ ಹೆಚ್ಚಿಸಲಾಗಿದೆ.
ಈ ಮಧ್ಯೆ, ಪಕ್ಷದ ಸಾಮಾನ್ಯ ಸಭೆಗೆ ತಡೆ ನೀಡುವಂತೆ ಒ ಪನ್ನೀರ್ ಸೆಲ್ಂ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಬಳಿಕ, ನಡೆದ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎ. ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಸಭೆ 16 ನಿರ್ಣಯಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.