ಚಂಡೀಗಡ: ಕಾಂಗ್ರೆಸ್ ಸಾಯುವ ಸ್ಥಿತಿಯಲ್ಲಿದೆ ಎಂದು ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಸಿಧು ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಚರಣ್ಜಿತ್ ಚನ್ನಿ ಅವರು ಶೀಘ್ರದಲ್ಲೇ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಪಂಜಾಬ್ ಕ್ರೀಡಾ ಸಚಿವ ಪರ್ಗತ್ ಸಿಂಗ್ ಸಿಧು ಅವರನ್ನು ಸಮಾಧಾನಪಡಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.
ರೈತರ ಹತ್ಯೆ ವಿರೋಧಿಸಿ ಸಿಧು ಅವರು ಗುರುವಾರ ಲಖಿಂಪುರ ಖೇರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಅಪಾರ ಸಂಖ್ಯೆಯ ಪಕ್ಷದ ನಾಯಕರು, ಶಾಸಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೊಹಾಲಿಯಲ್ಲಿ ಆರಂಭಗೊಂಡಿದ್ದ ಮೆರವಣಿಗೆ ನಂತರ ಲಖಿಂಪುರ ಖೇರಿಯತ್ತ ತೆರಳಿತ್ತು. ಮುಖ್ಯಮಂತ್ರಿ ಚನ್ನಿ ಮೆರವಣಿಗೆ ಆರಂಭಕ್ಕೂ ಮುನ್ನ ತುಸು ಹೊತ್ತು ಸಿಧುಗೆ ಸಾಥ್ ನೀಡಿ ನಿರ್ಗಮಿಸಿದ್ದರು.
ಮೂಲಗಳ ಪ್ರಕಾರ, ಪ್ರತಿಭಟನಾ ಮೆರವಣಿಗೆಯು ಯಶಸ್ವಿಯಾಗಲಿದೆ ಎಂದು ಸಿಧು ಬಳಿ ಕಾಂಗ್ರೆಸ್ನ ಪಂಜಾಬ್ ಘಟಕದ ಕಾರ್ಯಕಾರಿ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಧು, ‘ಎಲ್ಲಿದೆ ಯಶಸ್ಸು? ಕಾಂಗ್ರೆಸ್ ಸಾಯುವ ಸ್ಥಿತಿಯಲ್ಲಿದೆ’ ಎಂದು ಹೇಳಿದ್ದಾರೆ.