ನವದೆಹಲಿ:ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ನಿಷ್ಠರಾಗಿರುವ ಮೂವರಿಗೆ ‘ಗಂಭೀರ ಸ್ವರೂಪದ ಅಶಿಸ್ತು’ ತೋರಿದ ಆರೋಪದಡಿ ಕಾಂಗ್ರೆಸ್ನ ಹೈಕಮಾಂಡ್ ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಸಚಿವ ಶಾಂತಿಕುಮಾರ್ ಧರಿವಾಲ್, ಮುಖ್ಯ ಸಚೇತಕಮಹೇಶ್ ಜೋಶಿ, ಶಾಸಕ ಧರ್ಮೇಂದ್ರ ರಾಠೋಡ್ ಅವರಿಗೆ ನೋಟಿಸ್ ನೀಡಲಾಗಿದೆ. ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಭಾನುವಾರ ಕರೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಗೆ ಇವರು ಗೈರು ಹಾಜರಾಗಿದ್ದು ಅಷ್ಟೇ ಅಲ್ಲದೆ ಪರ್ಯಾಯ ಸಭೆ ನಡೆಸಿದ್ದರು.
ನೋಟಿಸ್ಗೆ ಉತ್ತರಿಸಲು 10 ದಿನ ಸಮಯ ನೀಡಲಾಗಿದೆ. ‘ಗಂಭೀರ ಸ್ವರೂಪದ ಅಶಿಸ್ತು ತೋರಿರುವ ನಿಮ್ಮ ವಿರುದ್ಧ ಏಕೆ ಶಿಸ್ತುಕ್ರಮ ಜರುಗಿಸಬಾರದು’ ಎಂದು ಶಿಸ್ತು ಸಮಿತಿ ಮುಖ್ಯಸ್ಥರೂ ಆದ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ನೋಟಿಸ್ನಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿನ ಪಕ್ಷದ ಬೆಳವಣಿಗೆಗೆ ಸಂಬಂಧಿಸಿದಂತೆ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಾಕನ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 9 ಪುಟದ ವರದಿ ಸಲ್ಲಿಸಿದ್ದರು.
ಮಂಗಳವಾರದ ಬೆಳವಣಿಗೆ
l ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಮತ್ತೆ ಪ್ರಯತ್ನ ಆರಂಭಿಸಿದೆ. ಪಿತೂರಿ ನಡೆಸುತ್ತಿದೆ ಎಂದು ಸಚಿವ ಪ್ರತಾಪ್ ಸಿಂಗ್ ಖಾಚರಿಯವಾಸ್ ಹೇಳಿದ್ದಾರೆ
l ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸಚಿವ ರಾಜೇಂದ್ರ ಸಿಂಗ್ ಗುಢ ಆಗ್ರಹಿಸಿದ್ದಾರೆ
l ಗೆಹಲೋತ್ ಅವರಿಗೆ ನಿಷ್ಠರಾಗಿರುವ ಶಾಸಕರು ಪರ್ಯಾಯ ಸಭೆ ನಡೆಸಿದ್ದರ ಉದ್ದೇಶ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಆಗಿರಲಿಲ್ಲ ಎಂದು ಮುಖ್ಯ ಸಚೇತಕ ಮಹೇಶ್ ಜೋಶಿ ಹೇಳಿದ್ದಾರೆ
l ಕಾಂಗ್ರೆಸ್ ಮುಖಂಡರಾದ ಎ.ಕೆ. ಆ್ಯಂಟನಿ ಮತ್ತು ಸುಶೀಲ್ ಕುಮಾರ್ ಶಿಂದೆ ಅವರಿಗೆ ದೆಹಲಿಗೆ ಬರಲು ಸೂಚಿಸಲಾಗಿದೆ
l ಸೋನಿಯಾ ಅವರ ನಿರ್ಧಾರಕ್ಕೆ ಬದ್ಧರಾಗಿ ಇರುವುದಾಗಿ ಗೆಹಲೋತ್ ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ