ಮುಂಬೈ: ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಹಾಗೂ ಬಜರಂಗದಳವನ್ನು ತಾಲಿಬಾನಿಗಳ ಜೊತೆ ಹೋಲಿಕೆ ಮಾಡಿರುವ ಹಿರಿಯ ಕವಿ, ಸಾಹಿತಿ ಜಾವೇದ್ ಅಖ್ತರ್ ವಿವಾದಕ್ಕೊಳಗಾಗಿದ್ದಾರೆ.
ವಸ್ತುನಿಷ್ಠವಾಗಿ ವೀಕ್ಷಿಸಿದಾಗ ಹೆಸರುಗಳು ಮತ್ತು ಮುಖಛಾಯೆ ಬದಲಾಗಬಹುದು, ಆದರೆ ವಿಶ್ವದಾದ್ಯಂತ ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದುಸುದ್ದಿ ವಾಹಿನಿಗೆ ಹಿರಿಯ ಬರಹಗಾರ, ಗೀತರಚನೆಕಾರ ಜಾವೇದ್ ಅಖ್ತರ್ ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಕಾನೂನು ವೃತ್ತಿಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಲಿ: ಮುಖ್ಯ ನ್ಯಾಯಮೂರ್ತಿ ರಮಣ
'ತಾಲಿಬಾನಿಗಳಂತೆ ಬಲಪಂಥೀಯ ಸಂಘಟನೆಗಳು ಕೂಡಾ ಯಾವುದೇ ಕಾನೂನು ತಮ್ಮ ಧಾರ್ಮಿಕ ನಂಬಿಕೆಗಿಂತ ಮಿಗಿಲಾಗಿಲ್ಲ' ಎಂದು ಭಾವಿಸುತ್ತದೆ ಎಂದು ಹೇಳಿದ್ದಾರೆ.
'ತಾಲಿಬಾನಿಗಳು ಇಸ್ಲಾಮಿಕ್ ಸ್ಟೇಟ್ ಅನ್ನು ಬಯಸಿದಂತೆ ಬಲಪಂಥೀಯರು ಹಿಂದೂ ರಾಷ್ಟ್ರವನ್ನು ಬಯಸುತ್ತಾರೆ. ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ. ಅದು ಮುಸ್ಲಿಂ, ಕ್ರಿಸ್ಟಿಯನ್, ಯಹೂದಿ ಅಥವಾ ಹಿಂದೂಗಳೇ ಆಗಿರಬಹುದು. ನಿಸ್ಸಂಶಯವಾಗಿಯೂ ಅವರ ವರ್ತನೆಯು ಹೇಯ ಮತ್ತು ಖಂಡನೀಯ. ಆದರೆ ಆರ್ಎಸ್ಎಸ್, ವಿಎಚ್ಪಿ ಹಾಗೂ ಬಜರಂಗದಳವನ್ನು ಬೆಂಬಲಿಸುವವರೆಲ್ಲರೂ ಒಂದೇ ಆಗಿದ್ದಾರೆ' ಎಂದು ಹೇಳಿದ್ದಾರೆ.
ಜಾವೇದ್ ಅಖ್ತರ್ ಹೇಳಿಕೆಗೆ ಆಡಳಿತರೂಢ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
'ತಮ್ಮ ಹೇಳಿಕೆಗಾಗಿ ಜಾವೇದ್ ಅಖ್ತರ್ ಕೈಮುಗಿದು ಕ್ಷಮೆಯಾಚಿಸುವ ವರೆಗೂ ಅವರ ಯಾವ ಸಿನಿಮಾವನ್ನು ಪ್ರದರ್ಶನಗೊಳ್ಳಲು ಬಿಡುವುದಿಲ್ಲ. ಅಲ್ಲದೆ ಪೊಲೀಸ್ ಪ್ರಕರಣ ದಾಖಲಿಸುವಂತೆ' ಮಹಾರಾಷ್ಟ್ರದ ಬಿಜೆಪಿ ಶಾಸಕ ಹಾಗೂ ವಕ್ತಾರ ರಾಮ್ ಕದಂ ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.