ಅಹಮದಾಬಾದ್: ವಾಹನಗಳ ತಪಾಸಣೆ ವೇಳೆ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಟ್ರಕ್ ಹತ್ತಿಸಿರುವ ಘಟನೆ ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಡರಾತ್ರಿ 1 ಗಂಟೆ ಸುಮಾರಿಗೆ ಬೊರ್ಸದ್ ಪಟ್ಟಣದ ಹೆದ್ದಾರಿ ಬಳಿ ಘಟನೆ ನಡೆದಿದೆ. ರಾಜಸ್ಥಾನ ನಂಬರ್ ಪ್ಲೇಟ್ ಹೊಂದಿದ್ದ ಅನುಮಾನಾಸ್ಪದ ಟ್ರಕ್ ಅನ್ನು ನಿಲ್ಲಿಸಲು ಕಾನ್ಸ್ಟೆಬಲ್ ಕರಣ್ ಸಿನ್ಹಾ ರಾಜ್(40) ಸಿಗ್ನಲ್ ತೋರಿಸಿದ್ದಾರೆ. ಆದರೂ ಟ್ರಕ್ ನಿಲ್ಲಿಸದ ಚಾಲಕ ಅವರ ಮೇಲೆಯೇ ಹರಿಸಿದ್ದಾನೆ ಎಂದು ಡಿವೈಎಸ್ಪಿ ಡಿ.ಎಚ್. ದೇಸಾಯಿ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅವರು ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು ಎಂದೂ ಡಿವೈಎಸ್ಪಿ ಹೇಳಿದ್ದಾರೆ.
ಚಾಲಕ ಟ್ರಕ್ ಬಿಟ್ಟು ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಮಂಗಳವಾರ, ಗುರುಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿವೈಎಸ್ಪಿ ಮೇಲೆ ಟ್ರಕ್ ಹರಿಸಿ ಕೊಲ್ಲಲಾಗಿತ್ತು.