ನವದೆಹಲಿ: ‘ಜನಗಣತಿ 2021’ ಮೊದಲ ಹಂತದ ಪ್ರಕ್ರಿಯೆಯನ್ನು ಕೋವಿಡ್ –19ನಿಂದ ಉದ್ಭವಿಸಿರುವ ಪರಿಸ್ಥಿತಿಯ ಕಾರಣದಿಂದಾಗಿ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜನಗಣತಿ ಪ್ರಕ್ರಿಯೆ ಈ ವರ್ಷದ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೂ ನಡೆಯಬೇಕಿತ್ತು.
ರಾಜ್ಯಸಭೆಯಲ್ಲಿ ಈ ಕುರಿತು ನೀಡಿರುವ ಲಿಖಿತ ಹೇಳಿಕೆಯಲ್ಲಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ಗಣತಿ ಅಂಕಿ ಅಂಶಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಬಹುಹಂತದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗಣತಿಯ ಅಂಕಿ ಅಂಶಗಳನ್ನು ಸುರಕ್ಷಿತವಾಗಿ ಇಡಲು ಒತ್ತು ನೀಡಲಾಗಿದೆ. ಮೊಬೈಲ್ ಆ್ಯಪ್ ಅಭಿವೃದ್ಧಿ, ಜನಗಣತಿ ಪೋರ್ಟಲ್ ನಿರ್ವಹಣೆ ಸಂಬಂಧಿತ ಚಟುವಟಿಕೆಗಳಿಗಾಗಿ ಸಿಸ್ಟಮ್ ಇಂಟಿಗ್ರೇಟರ್ಸ್ ಸಂಸ್ಥೆಯ ನೆರವು ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.