ಹೈದರಾಬಾದ್: ‘ಕರ್ನಾಟಕ ಸೇರಿದಂತೆ ಇತರೆ ರಾಜ್ಯದ ಜನರಿಗೆ ಬಿಜೆಪಿ ದ್ವೇಷ ಕಲಿಸುತ್ತಿದೆ. ದೇವರ ಹೆಸರಿನಲ್ಲಿ ಯುವ ಮನಸ್ಸುಗಳನ್ನು ಭ್ರಷ್ಟಗೊಳಿಸುತ್ತಿದೆ ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ದೂರಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಬಿಜೆಪಿ ಅಧಿಕಾರದಲ್ಲಿ ಹೀಗೆಯೇ ಮುಂದುವರಿದರೆ, ನಮ್ಮ ದೇಶ ಹಾಳಾಗಬಹುದು. ಈ ಕೋಮು ಬೆಂಕಿ (ಹಿಜಾಬ್–ಕೇಸರಿ ವಿವಾದ) ದೇಶದೆಲ್ಲೆಡೆ ಹಬ್ಬಿದರೆ ಪರಿಸ್ಥಿತಿ ಹೇಗಿರಬಹುದು? ನಮಗೆ ಅಭಿವೃದ್ಧಿ, ಬಂಡವಾಳಗಳ ಅಗತ್ಯವಿದೆಯೇ ಹೊರತು ಕೋಮು ಗಲಭೆಗಳಲ್ಲ’ ಎಂದರು.
‘ಮುಂದೆ ಏನಾಗುತ್ತದೆ ಎಂಬುದನ್ನು ಈಗಾಗಲೇ ಹೇಳಲು ಸಾದ್ಯವಿಲ್ಲ. ಆದರೆ, ಬಿಜೆಪಿಯನ್ನು ಹೊಡೆದೊಡಿಸಲು ಎಲ್ಲಾ ರಾಜಕೀಯ ಶಕ್ತಿಗಳು ಒಗ್ಗೂಡಬೇಕು’ ಎಂದು ಹೇಳಿದರು.
‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲು ನಾನು ಯಾವುದೇ ಸಮಯಮುಂಬೈಗೆ ತೆರಳಬಹುದು. ಅಲ್ಲದೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ಹೈದರಾಬಾದ್ಗೆ ಭೇಟಿ ನೀಡುವ ಸಾಧ್ಯತೆಗಳಿವೆ’ ಎಂದು ಅವರು ತಿಳಿಸಿದರು.