ಅಹಮದಾಬಾದ್: ಹನ್ನೆರಡು ದಿನ ಗುಜರಾತ್ನಿಂದ ಹೊರಗೆ ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸುವಂತೆಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಮಾಡಿದ ಮನವಿಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ.
ದೆಹಲಿಯಲ್ಲಿ ನಡೆಯುವ ರಾಜಕೀಯ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಅವರು ಮನವಿ ಮಾಡಿದ್ದರು.
2015ರಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಹಾರ್ದಿಕ್ ಅವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಗುಜರಾತ್ನಿಂದ ಹೊರಹೋಗದಂತೆ ನಿರ್ಬಂಧ ವಿಧಿಸಲಾಗಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಜೆ. ಗಣತ್ರಾ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದು, ‘ಕೊರೊನಾ ಸೋಂಕು ಭಾರತದಾದ್ಯಂತ ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ,ರಾಜಕೀಯ ಅಥವಾ ಸಾಮಾಜಿಕ ಸಭೆಗಳನ್ನು ಆನ್ಲೈನ್ ಮೂಲಕವೂ ನಡೆಸಬಹುದು. ಅರ್ಜಿದಾರರ ಕೋರಿಕೆ ಸಮಂಜಸವಾಗಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.