ಡೆಹ್ರಾಡೂನ್: ‘ಉತ್ತರಾಖಂಡದ ಹಿಮಾಲಯದನಾಲ್ಕು ಪ್ರಸಿದ್ಧ ಕ್ಷೇತ್ರಗಳಿಗೆ ಮುಂದಿನ ತಿಂಗಳಿನಿಂದ ಆರಂಭವಾಗಬೇಕಿದ್ದ ‘ಚಾರ್ಧಾಮ್ ಯಾತ್ರೆ’ಯನ್ನು ಮುಂದೂಡಲಾಗಿದೆ‘ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್ಸಿಂಗ್ ರಾವತ್ ತಿಳಿಸಿದ್ದಾರೆ.
ದೇಶದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಚಾರ್ಧಾಮ್ ಯಾತ್ರೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತೀರಥ್ ಸಿಂಗ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆದರೂ ಹಿಮಾಲಯ ಶ್ರೀಕ್ಷೇತ್ರಗಳೆಂದೇ ಕರೆಯುವ ಬದ್ರಿನಾಥ, ಕೇದಾರನಾಥ , ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿರುವ ದೇವಾಲಯಗಳಲ್ಲಿ ನಿಗದಿಯಂತೆ ಪೂಜೆ, ಪ್ರಾರ್ಥನೆ ನಡೆಸಲು ಅರ್ಚಕರಿಗೆ ಅನುಮತಿ ನೀಡಲಾಗಿದೆ. ಈ ಅನುಮತಿ ಅರ್ಚಕರಿಗೆ ಹೊರತು, ಭಕ್ತರಿಗೆ ಅಲ್ಲ‘ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉತ್ತರಾಖಂಡ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಈ ತೀರ್ಮಾನ ಕೈಗೊಳ್ಳಲಾಗಿದೆ.