ಪುಣೆ: 2013ರಲ್ಲಿ ನಡೆದ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಐವರು ಆರೋಪಿಗಳು ದೇಶದ ಜನರಲ್ಲಿ ಭಯ ಹುಟ್ಟಿಸುವಂತಹ ಕೃತ್ಯ ಎಸಗಿದ್ದು, ಇವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ವಿಚಾರಣೆ ನಡೆಸಬೇಕು ಎಂದುಸಿಬಿಐ ಹೇಳಿದೆ.
ಈ ಪ್ರಕರಣದ ಐವರು ಆರೋಪಿಗಳಾದ ಡಾ ವೀರೇಂದ್ರಸಿನ್ಹ ತಾವ್ಡೆ, ಶರದ್ ಕಳಸ್ಕರ್, ಸಚಿನ್ ಅಂದೂರೆ, ವಕೀಲ ಸಂಜೀವ್ ಪುಣಾಲೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್. ಆರ್. ನವಂದಾರ್ ಎದುರು ಶುಕ್ರವಾರ ಹಾಜರುಪಡಿಸಿದ ವೇಳೆ, ಸಿಬಿಐ ಈ ವಾದ ಮಂಡಿಸಿತು.
ಸಿಬಿಐ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಸೂರ್ಯವಂಶಿ, ‘ಆರೋಪಿಗಳ ವಿರುದ್ಧ ಐಪಿಸಿ ಹಾಗೂ ಯುಎಪಿಎಯ ವಿವಿಧ ಸೆಕ್ಷನ್ಗಳಡಿ ದೋಷಾರೋಪ ಹೊರಿಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆರೋಪಿಗಳ ವಿರುದ್ಧ ಯುಎಪಿಎ ಸೆಕ್ಷನ್ 16 ಅಡಿ ದೋಷಾರೋಪ ಹೊರಿಸಿದ್ದನ್ನು ಸಮರ್ಥಿಸಿಕೊಂಡರು.