ಕೋಟ(ರಾಜಸ್ಥಾನ): ದಲಿತ ಬಾಲಕನ ಸಾವು ಖಂಡಿಸಿ ರಾಜಸ್ಥಾನದ ಬಾರಾನ್ ನಗರಸಭೆಯ 12 ಮಂದಿ ಕಾಂಗ್ರೆಸ್ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
ಶಾಸಕ ಪನಾ ಚಂದ್ ಮೇಘವಾಲ್ ರಾಜೀನಾಮೆ ಬೆನ್ನಲ್ಲೇ ನಗರಸಭೆ ಸದಸ್ಯರೂ ಸಹ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯವನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕೆ ಖಾಸಗಿ ಶಾಲಾ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್ ಎಂಬುವನನ್ನು ಥಳಿಸಿದ್ದರು. ಶಿಕ್ಷಕರ ದೌರ್ಜನ್ಯಕ್ಕೆ ತುತ್ತಾದ ಬಾಲಕ ಕಳೆದ ಶನಿವಾರ ಮೃತಪಟ್ಟಿದ್ದ.
ಈ ಹಿನ್ನೆಲೆಯಲ್ಲಿ ಬಾರಾನ್–ಅತ್ರು ಕ್ಷೇತ್ರದ ಶಾಸಕ ಪನಾ ಚಂದ್ ಮೇಘವಾಲ್ ಸೋಮವಾರ, ಸಿಎಂ ಗೆಹಲೋತ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು.
ಮೃತ ಬಾಲಕನ ಕುಟುಂಬದ ಭೇಟಿಗೆ ಜಲೋರ್ಗೆ ತೆರಳಿರುವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ದಲಿತ ಸಮುದಾಯದ ನಂಬಿಕೆ ಉಳಿಸಿಕೊಳ್ಳುವ ದೃಷ್ಟಿಯಿಂದ ಈ ಪ್ರಕರಣದಲ್ಲಿ ಕಠಿಣ ಸಂದೇಶ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಬಾರಾನ್ ನಗರಸಭೆಯಲ್ಲಿ 25 ಕಾಂಗ್ರೆಸ್ ಸದಸ್ಯರಿದ್ದು, ಆ ಪೈಕಿ 12 ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
ದಲಿತರ ರಕ್ಷಣೆ ವಿಚಾರದಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ, ಶಾಸಕರಿಗೆ ಬೆಂಬಲವಾಗಿ ರಾಜೀನಾಮೆ ಸಲ್ಲಿಸಿರುವುದಾಗಿ 29ನೇ ವಾರ್ಡ್ ಸದಸ್ಯ ಯೋಗೇಂದ್ರ ಮೆಹ್ತಾ ಹೇಳಿದ್ದಾರೆ.
ರೋಹಿತಾಶ್ವ ಸಕ್ಸೇನಾ, ರಾಜಾರಾಮ್ ಮೀನಾ, ರೇಖಾ ಮೀನಾ, ಲೀಲಾಧರ್ ನಗರ್, ಹರಿರಾಜ್ ಎರ್ವಾಲ್, ಪಿಯೂಷ್ ಸೋನಿ, ಊರ್ವಶಿ ಮೇಘವಾಲ್, ಯಶವಂತ್ ಯಾದವ್, ಅನ್ವರ್ ಅಲಿ, ಜ್ಯೋತಿ ಜಾಥವ್, ಮಯಂಕ್ ಮತೋಡಿಯಾ ರಾಜೀನಾಮೆ ಕೊಟ್ಟ ಇತರೆ ಸದಸ್ಯರಾಗಿದ್ದಾರೆ.