ಮುಂಬೈ: 'ಬೆಂಕಿ ಅವಘಡದಿಂದ ಕೋವಿಶೀಲ್ಡ್ ಲಸಿಕೆ ಉತ್ಪಾದನೆ, ಪೂರೈಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಅನಾಹುತದಿಂದ ಸೀರಂ ಇನ್ಸ್ಟಿಟ್ಯೂಟ್ಗೆ ₹1,000 ಕೋಟಿ ನಷ್ಟವಾಗಿದೆ,' ಎಂದು ಸಂಸ್ಥೆಯ ಸಿಇಒ ಆದರ್ ಪೂನಾವಾಲ ಹೇಳಿದ್ದಾರೆ.
ಮುಂಬೈನಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ಸೀರಂ ಇನ್ಸ್ಟಿಟ್ಯೂಟ್ನ ಸಿಇಒ ಆದರ್ ಪೂನಾವಾಲ ಈ ವಿಷಯ ಬಹಿರಂಗಪಡಿಸಿದ್ದಾರೆ.
ಕೋವಿಡ್ ಲಸಿಕೆಯ ಉತ್ಪಾದನೆ, ಪೂರೈಕೆ ಮೇಲೆ ಬೆಂಕಿ ಅವಘಡವು ಯಾವುದೇ ಪರಿಣಾಮ ಬೀರುವುದಿಲ್ಲ. ಹೇಳಬೇಕೆಂದರೆ, ಅನಾಹುತ ಸಂಭವಿಸಿದ ಕಟ್ಟಡದಲ್ಲಿ ಲಸಿಕೆಯ ಉತ್ಪಾದನೆಯೂ ನಡೆಯುತ್ತಿರಲಿಲ್ಲ. ಆದರೆ, ಘಟನೆಯಲ್ಲಿ ಸೀರಂ ಇನ್ಸ್ಟಿಟ್ಯೂಟ್ಗೆ ₹1,000 ಕೋಟ್ ನಷ್ಟ ಸಂಭವಿಸಿದೆ ಎಂದು ಪೂನಾವಾಲ ಹೇಳಿದರು.
ಘಟನೆಯಿಂದ ನಮಗೆ ಆರ್ಥಿಕ ನಷ್ಟ ಸಂಭವಿಸಿದೆ. ಈ ನಷ್ಟವು ಭವಿಷ್ಯದಲ್ಲಿ ಬಿಸಿಜಿ ಮತ್ತು ರೋಟಾ ವೈರಸ್ ಲಸಿಕೆಗಳ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದರು.
ಬೆಂಕಿಯಿಂದಾಗಿ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಗೆ ತೊಂದರೆಯಾಗಿಲ್ಲ. ದಾಸ್ತಾನಿಗೂ ಸಮಸ್ಯೆಯಾಗಿಲ್ಲ ಎಂದು ಪೂನಾವಾಲ ಸ್ಪಷ್ಟಪಡಿಸಿದ್ದಾರೆ.