ಇಂದೋರ್ (ಮಧ್ಯ ಪ್ರದೇಶ): ನಗರದ ಬಲೇಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ದುರಂತಕ್ಕೆ ಸಾವಿಗೀಡಾದವರ ಸಂಖ್ಯೆ ಶುಕ್ರವಾರ 35ಕ್ಕೆ ಏರಿದ್ದು, ಒಬ್ಬರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಗುರುವಾರ ರಾಮನವಮಿ ಆಚರಣೆ ವೇಳೆ ದೇವಸ್ಥಾನದಲ್ಲಿ ಜನ ದಟ್ಟಣೆ ಏರ್ಪಟ್ಟಿತ್ತು. ಅಲ್ಲಿರುವ ಬಾವಿಯಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರ ದಂಡು ಜಮಾಯಿಸಿತ್ತು. ಈ ವೇಳೆ ನಾಲ್ಕು ದಶಕಗಳಷ್ಟು ಹಳೆಯ ಮೆಟ್ಟಿಲು ಕುಸಿದಿದೆ. ಪರಿಣಾಮ ಅದರ ಮೇಲೆ ನಿಂತಿದ್ದ ಹಲವಾರು ಜನರು ಬಾವಿಗೆ ಬಿದ್ದಿದ್ದು, 11 ಜನರ ಮೃತದೇಹವನ್ನು ಅಗ್ನಿಶಾಮಕ ದಳದವರು ಹೊರತೆಗೆದಿದ್ದರು. ಉಳಿದವರ ಪತ್ತೆಗಾಗಿ ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ಹಾಗೂ ಸೇನೆಯ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
’ಅವಘಡದಲ್ಲಿ ಗಾಯಗೊಂಡ 16 ಮಂದಿಯನ್ನು ಆಸ್ಪತ್ರೆಗೆ ದಾಖಲುಪಡಿಸಲಾಗಿದೆ. ಹಾಗೂ ಇಬ್ಬರಿಗೆ ಪ್ರಥಮ ಚಿಕಿತ್ಸೆ ಕೊಡಲಾಗಿದೆ’ ಎಂದು ದುರಂತ ನಡೆದ ಸಂದರ್ಭ ಕಂದಾಯ ಆಯುಕ್ತರಾದ ಪವನ್ ಕುಮಾರ್ ಶರ್ಮಾ ಅವರು ಹೇಳಿದ್ದರು.
’ತುಂಬಾ ಇಕ್ಕಟ್ಟಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದ್ದು, ಇಲ್ಲಿನ ಬಾವಿಯ ನೀರು ಪಂಪು ಮಾಡಿ ಮೇಲೆತ್ತಲು ಬಳಸುವ ಕೊಳವೆ ದ್ವಾರ ಒಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ’ ಎಂಬುದು ಅಧಿಕಾರಿಗಳ ಅಭಿಪ್ರಾಯ.
’ಕಳಪೆ ಗುಣಮಟ್ಟದ ಸಿಮೆಂಟು ಹಲಗೆ ಬಳಸಿ ಬಾವಿ ಮೇಲೆ ಮೆಟ್ಟಿಲನ್ನು ನಿರ್ಮಿಸಲಾಗಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.