ನವದೆಹಲಿ: ಪತ್ರಕರ್ತರವನ್ನು ಮುಂಚೂಣಿ ಕೆಲಸಗಾರರು ಎಂದು ಘೋಷಿಸಿ, ಆದ್ಯತೆ ಮೇರೆಗೆ ಕೋವಿಡ್–19ರ ಲಸಿಕೆ ನೀಡಬೇಕು ಎಂದು ಭಾರತೀಯ ಸಂಪಾದಕರ ಕೂಟವು (ಇಜಿಐ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಸಾಂಕ್ರಾಮಿಕ ರೋಗ, ಚುನಾವಣೆ ಮತ್ತು ಇತರ ಪ್ರಚಲಿತ ವಿದ್ಯಮಾನಗಳ ಕುರಿತು ಸುದ್ದಿ ಸಂಸ್ಥೆಗಳು ಬಿಡುವಿಲ್ಲದೆ ಸುದ್ದಿ ಮತ್ತು ಮಾಹಿತಿಯನ್ನು ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ ಮಾಧ್ಯಮವನ್ನು ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಲಸಿಕೆ ನೀಡುವುದರ ಮೂಲಕ ರಕ್ಷಣೆಯ ಹೊದಿಕೆ ನೀಡುವುದು ನ್ಯಾಯೋಚಿತ ಎಂದು ಇಜಿಐ ಪ್ರತಿಪಾದಿಸಿದೆ.
ಲಸಿಕೆಯ ರಕ್ಷಣೆ ಇಲ್ಲದೆ, ಪತ್ರಕರ್ತರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಎಲ್ಲ ಪತ್ರಕರ್ತರಿಗೂ (ವಯೋಮಿತಿ ಹೇರದೆ) ಲಸಿಕೆ ನೀಡಬೇಕು ಎಂದು ಕೂಟ ಮನವಿ ಮಾಡಿದೆ.