ನವದೆಹಲಿ (ಪಿಟಿಐ): ದೆಹಲಿಯ ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಾಗೂ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ 35 ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು.
ದೆಹಲಿ, ಪಂಜಾಬ್, ಹೈದರಾಬಾದ್ನಲ್ಲಿಮದ್ಯ ವಿತರಕರು, ಕಂಪನಿಗಳು, ಭಾಗಿದಾರ ಸಂಸ್ಥೆಗಳಿಗೆ ಸೇರಿದ ವಿವಿಧೆಡೆ ದಾಳಿ ನಡೆಯಿತು. ಕೆಲ ಆರೋಪಿಗಳನ್ನು ತನಿಖೆಗೆ ಒಳಪಡಿಸಿದ್ದು, ದಾಖಲೆಗಳನ್ನೂ ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯವು ಈ ಹಗರಣಕ್ಕೆ ಸಂಬಂಧಿಸಿ ಇದುವರೆಗೂ ಸುಮಾರು 103 ದಾಳಿ ನಡೆಸಿದೆ. ಅಲ್ಲದೆ, ಇಂಡೊಸ್ಪಿರಿಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಉದ್ಯಮಿ ಸಮೀರ್ ಮಹಾಂದ್ರು ಅವರನ್ನೂ ಬಂಧಿಸಿದೆ.
ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕೆಟ್ಟ ರಾಜಕಾರಣ –ಕೇಜ್ರಿವಾಲ್
ನವದೆಹಲಿ(ಪಿಟಿಐ): ಇ.ಡಿ ಅಧಿಕಾರಿಗಳು ಶುಕ್ರವಾರ ವಿವಿಧೆಡೆ ದಾಳಿ ನಡೆಸಿದ್ದಾರೆ. ಮನೀಶ್ ಸಿಸೋಡಿಯಾ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಗುರಿ ಇದ್ದರೂ ಅಧಿಕಾರಿಗಳು ದಾಳಿಯಲ್ಲಿ ಏನೂ ಸಿಕ್ಕಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
ಕೆಟ್ಟ ರಾಜಕಾರಣದ ಭಾಗವಾಗಿ ಸಿಬಿಐ ಮತ್ತು ಇ.ಡಿಗೆ ಸೇರಿದ ನೂರಾರು ಅಧಿಕಾರಿಗಳ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಇಂತಹ ಮನಸ್ಥಿತಿಯಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದೂ ಪ್ರಶ್ನಿಸಿದ್ದಾರೆ.