ಚೆನ್ನೈ: ‘ಬಿಜೆಪಿಯ ಉದ್ದೇಶಿತ ‘ವೇಲ್’ ಅಥವಾ ‘ವೆಟ್ರಿವೇಲ್’ ಯಾತ್ರೆಗೆ ಅನುಮತಿ ನೀಡಬಾರದು’ ಎಂದು ವಿಡುದಲೈ ಚಿರುಥೈಗಳ್ ಪಕ್ಷದ (ವಿಸಿಕೆ) ಸಂಸ್ಥಾಪಕ ದೋಳ್ತಿರುಮಾವಳವನ್ ಅವರು ತಮಿಳುನಾಡಿನ ಡಿಜಿಪಿ ಜೆ.ಕೆ.ತ್ರಿಪಾಠಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನವೆಂಬರ್ 6 ರಿಂದ ಡಿಸೆಂಬರ್ 6 ರವರೆಗೆ ತಮಿಳುನಾಡಿನಾದ್ಯಂತ ‘ವೇಲ್’ ಯಾತ್ರೆ ನಡೆಸುವುದಾಗಿ ಬಿಜೆಪಿ ಈಗಾಗಲೇ ಘೋಷಿಸಿದೆ. ಉತ್ತರ ತಮಿಳುನಾಡಿನ ತಿರುಟ್ಟಾನಿಯಲ್ಲಿ ಆರಂಭವಾಗಲಿರುವ ರ್ಯಾಲಿಯು ತಿರುಚೆಂಡೂರಿನಲ್ಲಿ ಕೊನೆಗೊಳ್ಳಲಿದೆ.
‘ರಾಜ್ಯದಲ್ಲಿ ಕೋಮು ಸಂಘರ್ಷವನ್ನು ಹುಟ್ಟಿಹಾಕುವುದು ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಉದ್ದೇಶದಿಂದಲೇ ಬಿಜೆಪಿಯು ಈ ಯಾತ್ರೆ ಹಮ್ಮಿಕೊಂಡಿದೆ. ಹೀಗಾಗಿ ಇದಕ್ಕೆ ಅನುಮತಿ ನೀಡಬಾರದೆಂದು ಡಿಜಿಪಿ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ’ ಎಂದುತಿರುಮಾವಳವನ್ ತಿಳಿಸಿದ್ದಾರೆ.
‘ಬಿಜೆಪಿಯು ಉದ್ದೇಶಿತ ಯಾತ್ರೆಯ ಪೋಸ್ಟರ್ಗಳಲ್ಲಿ ಎಐಎಡಿಎಂಕೆಯ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರ ಭಾವಚಿತ್ರಗಳನ್ನು ಬಳಸಿರುವುದು ನಾಚಿಕೆಯ ವಿಷಯ’ ಎಂದೂ ಕಿಡಿಕಾರಿದ್ದಾರೆ.
‘ಬಿಜೆಪಿ ಮುಖಂಡ ಎಚ್.ರಾಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಿದ್ದೇನೆ’ ಎಂದೂ ಅವರು ಹೇಳಿದ್ದಾರೆ.