ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಎಂದು ಬದಲಿಸುವುದಕ್ಕೆ ಚುನಾವಣಾ ಆಯೋಗವು ಸಮ್ಮತಿ ಸೂಚಿಸಿದೆ.
ಈ ಕುರಿತು ಆಯೋಗವು ಗುರುವಾರ ಬಿಆರ್ಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಪತ್ರ ರವಾನಿಸಿದೆ.
‘ಟಿಆರ್ಎಸ್ ಪಕ್ಷಕ್ಕೆ ಬಿಆರ್ಎಸ್ ಎಂದು ಮರುನಾಮಕರಣ ಮಾಡಲು ಅನುಮತಿ ನೀಡುವಂತೆ ನೀವು ಅಕ್ಟೋಬರ್ 5ರಂದು ಪತ್ರ ಬರೆದಿದ್ದಿರಿ. ನಿಮ್ಮ ಮನವಿಯನ್ನು ಪುರಸ್ಕರಿಸಲಾಗಿದೆ. ಈ ಕುರಿತು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಆಯೋಗವು ತನ್ನ ಪತ್ರದಲ್ಲಿ ತಿಳಿಸಿದೆ.