ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್ಗೆ ಸಾಲ ವಂಚನೆಯ ಆರೋಪದಡಿ ಜಾರಿ ನಿರ್ದೇಶನಾಲಯವು (ಇ.ಡಿ), ಬೆಂಗಳೂರು ಮೂಲದ ಸಂಬಾರ ಉತ್ಪನ್ನಗಳ ಕಂಪನಿಯ ₹145 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಎಸ್.ಎ. ರಾವ್ತರ್ ಸ್ಪೈಸಸ್ ಪ್ರೈ. ಲಿ ಕಂಪನಿಗೆ ಸೇರಿದ ಕಟ್ಟಡ, ಅಂಗಡಿಗಳು, ಪ್ಲಾಟ್ಗಳು ಮತ್ತು ಜಮೀನುಗಳನ್ನು ಹಣಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್ಎ) ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ. ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಭಷ್ಟ್ರಾಚಾರ ನಿಗ್ರಹ ದಳದ ಸಿಬ್ಬಂದಿ, ಕಂಪನಿಯ ಪ್ರವರ್ತಕರಾದ ಸೈಯದ್ ಅನಿಶ್ ರಾವ್ತರ್ ಹಾಗೂ ಬೆಂಗಳೂರಿನಲ್ಲಿರುವ ಜೆ ಅಂಡ್ ಕೆ ಬ್ಯಾಂಕ್ ಶಾಖೆಯಲ್ಲಿ ಆಗಸ್ಟ್ 2019ರಲ್ಲಿ ವ್ಯವಸ್ಥಾಪಕ ಆಗಿದ್ದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಅದರ ಆಧಾರದಲ್ಲಿ ಇ.ಡಿ. ಕ್ರಮ ಕೈಗೊಂಡಿದೆ.