ನವದೆಹಲಿ (ಪಿಟಿಐ): ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಕಾರ್ಯಾಚರಣೆ ನಡೆಸಿ ಎಲ್ಲ ಭ್ರಷ್ಟರನ್ನು ‘ಒಂದು ಪಕ್ಷಕ್ಕೆ’ ತರುತ್ತಿವೆ. ಬಿಜೆಪಿ ಆಡಳಿತ ಕೊನೆಯಾದ ದಿನ ದೇಶವು ಭ್ರಷ್ಟಾಚಾರದಿಂದ ಮುಕ್ತಿ ಹೊಂದಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಿ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನ ಮಾಡುವ ಯಾವುದೇ ಅವಕಾಶವನ್ನೂ ಬಿಜೆಪಿ ಕೈಬಿಡುವುದಿಲ್ಲ ಎಂದು ಆರೋಪಿಸಿದರು.
‘ಎಲ್ಲ ಕಳ್ಳರು, ಲೂಟಿಕೋರರು ಮತ್ತು ಭ್ರಷ್ಟರು ಒಂದು ಪಕ್ಷದಲ್ಲಿದ್ದಾರೆ. ಬಿಜೆಪಿ ಆಡಳಿತ ಕೊನೆಯಾಗಿ ಅವರೆಲ್ಲಾ ಜೈಲಿಗೆ ಹೋದರೆ ದೇಶವು ಭ್ರಷ್ಟಾಚಾರ ಮುಕ್ತವಾಗಲಿದೆ’ ಎಂದು ಹೇಳಿದರು.
‘ನಮ್ಮ ಶಾಸಕರಿಗೆ ಸಿಬಿಐ ಮತ್ತು ಇ.ಡಿ ದಾಳಿಯ ಬೆದರಿಕೆವೊಡ್ಡಲಾಗಿತ್ತು. ₹25 ಕೋಟಿ ಲಂಚದ ಆಮಿಷವೊಡ್ಡಲಾಗಿತ್ತು. ಆದರೆ ಅದ್ಯಾವುದಕ್ಕೂ ಅವರು ಬಗ್ಗಲಿಲ್ಲ’ ಎಂದು ಹೇಳಿದರು.
‘ಹೆದರದಿರಿ. ನೀವು ಜೈಲಿಗೆ ಹೋದರೂ ನಿಮ್ಮ ಕುಟುಂಬವನ್ನು ನಾನು ನೋಡಿಕೊಳ್ಳುತ್ತೇನೆ’ ಎಂದರು.
‘ಕೇಂದ್ರದ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ನಾವು ಪ್ರಜಾಪ್ರಭುತ್ವವನ್ನು ನಂಬುತ್ತೇವೆ. ಹೀಗಾಗಿಯೇ ಸರ್ಕಾರದ ವಿರುದ್ಧ ಅವಿಶ್ವಾತಮತ ಮಂಡಿಸಲು ವಿಫಲವಾಗಿದ್ದರೂ ಬಿಜೆಪಿ ಶಾಸಕರಿಗೆ ಮಾತನಾಡಲು ಅವಕಾಶ ನೀಡಿದ್ದೇವೆ. ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ. 2025ರ ವಿಧಾನಸಭಾ ಚುನಾವಣೆ ಬಿಡಿ, 2050 ಚುನಾವಣೆಯಲ್ಲೂ ಬಿಜೆಪಿ ದೆಹಲಿಯಲ್ಲಿ ಗೆಲ್ಲುವುದಿಲ್ಲ’ ಎಂದು ಸವಾಲು ಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.