ನವದೆಹಲಿ:ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವಾಲಯವು ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರಿಂದ ಸಲಹೆಗಳನ್ನು ಆಹ್ವಾನಿಸಿದೆ ಎಂದುರಮೇಶ್ ಪೋಖ್ರಿಯಾಲ್ ನಿಶಾಂಕ್ ಭಾನುವಾರ ತಿಳಿಸಿದ್ದಾರೆ.
‘ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇದರ ಅನುಷ್ಠಾನ ಪ್ರಕ್ರಿಯೆಯನ್ನು ಮುಂದುವರಿಸಲು ದೇಶದಾದ್ಯಂತದ ಎಲ್ಲಾ ಶಿಕ್ಷಕರು ಮತ್ತು ಪ್ರಾಂಶುಪಾಲರಿಂದ ಸಲಹೆಗಳನ್ನು ಪಡೆಯಲು ನಾವು ನಿರ್ಧರಿಸಿದ್ದೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶಿಕ್ಷಕರಿಂದ ಬಂದ ಸಲಹೆಗಳನ್ನು ಎನ್ಸಿಇಆರ್ಟಿ ತಜ್ಞರ ತಂಡವು ಪರಿಶೀಲಿಸುತ್ತದೆ. ಸೀಮಿತ ಪದಗಳಲ್ಲಿ ಸಲಹೆ ನೀಡುವಂತೆ ತಿಳಿಸಲಾಗಿದೆ. ಉಪಯುಕ್ತ ಸಲಹೆ ನೀಡಿದ ಶಿಕ್ಷಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಲಾಗುವುದು ಎಂದು ಹೇಳಿದ್ದಾರೆ.