ಉದಕಮಂಡಲಂ, ತಮಿಳುನಾಡು: ಚೆನ್ನೈನ ಮೃಗಾಲಯದಲ್ಲಿ ಸಿಂಹವೊಂದು ಕೋವಿಡ್ 19 ಸೋಂಕಿನಿಂದ ಮೃತಪಟ್ಟು, 9 ಸಿಂಹಗಳಿಗೆ ಸೋಂಕು ಹರಡಿದ ಕೆಲವು ದಿನಗಳ ನಂತರ, ಮದುಮಲೈ ಶಿಬಿರದಲ್ಲಿರುವ 28 ಆನೆಗಳ ಗಂಟಲು ದ್ರವವನ್ನು ಪರೀಕ್ಷೆಗಾಗಿ ಮಂಗಳವಾರ ಸಂಗ್ರಹಿಸಲಾಗಿದೆ.
ಎಲ್ಲ ಆನೆಗಳಿಂದ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಉತ್ತರಪ್ರದೇಶದ ಇಜತ್ನಗರದಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸುವಂತೆ ಅರಣ್ಯ ಸಚಿವ ಕೆ.ರಾಮಚಂದ್ರನ್ ಆದೇಶಿಸಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಮುದುಮಲೈ ಶಿಬಿರದಲ್ಲಿ ಎಲ್ಲ 28 ಆನೆಗಳ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಯಿತು. ಆನೆಗಳನ್ನು ಒಂದು ಬದಿಯಲ್ಲಿ ಮಲಗಿಸಿ ಸೊಂಡಲು ಮತ್ತು ಬಾಯಿಯಿಂದ ದ್ರವವನ್ನು ತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಚೆನ್ನೈನ ವಂಡಲೂರಿನಲ್ಲಿರುವ ಅರಿಗ್ನಾರ್ ಅಣ್ಣಾ ಜೈವಿಕ ಉದ್ಯಾನದಲ್ಲಿ ಸಿಂಹವೊಂದು ಗುರುವಾರ ಕೊರೊನಾ ವೈರಸ್ನಿಂದ ಸಾವನ್ನಪ್ಪಿ, ಉದ್ಯಾನದಲ್ಲಿದ್ದ 11 ಸಿಂಹಗಳಲ್ಲಿ ಒಂಬತ್ತು ಸಿಂಹಗಳಲ್ಲಿ ಕೋವಿಡ್ ದೃಢಪಟ್ಟಿದ್ದರಿಂದ ಈ ಪರೀಕ್ಷೆ ನಡೆಸಲಾಗುತ್ತಿದೆ.
ಶಿಬಿರದಲ್ಲಿ 52 ಮಾವುತರು ಮತ್ತು 27 ಕವಾಡಿಗಳಿಗೆ ಕೋವಿಡ್ -19 ಲಸಿಕೆ ಹಾಕಲಾಗಿದೆ.