ಗೋವಾಲ್ಪರ (ಅಸ್ಸಾಂ): ಜಿಲ್ಲೆಯಲ್ಲಿರುವ ಕೆಸರು ಗುಂಡಿಯೊಂದರಲ್ಲಿ ಗುರುವಾರ ರಾತ್ರಿ ಸಿಲುಕಿದ್ದ ಆರು ಆನೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿಚಿತ್ರವೆಂದರೆ, ಇದೇ ಗುಂಡಿಯಲ್ಲಿ ಬುಧವಾರ ರಾತ್ರಿಯೂ ಐದು ಆನೆಗಳು ಸಿಲುಕಿದ್ದವು.
ಆನೆಗಳು ಗುಂಡಿಯಲ್ಲಿ ಸಿಲುಕಿದ್ದ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅದರಂತೆಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ, ಜೆಸಿಬಿ ಸಹಾಯದಿಂದ ಕೆಸರು ಗುಂಡಿಯ ಒಂದು ಭಾಗವನ್ನು ಬಗೆದು ಆನೆಗಳು ಮೇಲೇಳಲು ದಾರಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆಹಾರ ಮತ್ತು ನೀರಿಗಾಗಿ ಆನೆಗಳು ಈ ಪ್ರದೇಶಕ್ಕೆ ಆಗಾಗ್ಗೆ ಬರುತ್ತಿರುತ್ತವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸಂಕಷ್ಟದಲ್ಲಿದ್ದ ಎಲ್ಲ ಆನೆಗಳನ್ನು ರಕ್ಷಿಸಿ, ಸಮೀಪದ ಅರಣ್ಯಕ್ಕೆ ಅಟ್ಟಲಾಗಿದೆ.ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲಾಗುವುದು. ಆನೆಗಳು ನೀರು ಕುಡಿದು ಹಿಂತಿರುಗಲು ಅನುಕೂಲವಾಗುವಂತೆ ಗುಂಡಿಯನ್ನು ಅಗೆದು ಜಾಗ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.