ರಾಂಪುರ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಕೃಷಿ ಕೇಂದ್ರಿತ ದೇಶವಾದ ಭಾರತವು ‘ರೈತರ ಕಲ್ಯಾಣ ಕೇಂದ್ರಿವಾಗಿ’ ಬದಲಾವಣೆಗೊಳ್ಳುತ್ತಿರುವುದನ್ನು ಕಂಡು ವಿಪಕ್ಷಗಳು ತತ್ತರಿಸಿವೆ ಎಂದು ಕೇಂದ್ರ ಮಾಜಿ ಸಚಿವ, ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಇಲ್ಲಿ ನಡೆದ ರೈತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಖ್ವಿ, ‘ಬಿಜೆಪಿ ಸರ್ಕಾರ ರೈತರ ಸಬಲೀಕರಣವನ್ನು ಮಾಡುತ್ತಿದೆ. ವಿಪಕ್ಷಗಳು ರೈತರನ್ನು ದಾರಿ ತಪ್ಪಿಸಲು ಪಿತೂರಿಯಲ್ಲಿ ತೊಡಗಿವೆ’ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ದಶಕಗಳಿಂದ ಸಮಸ್ಯೆಯಾಗುತ್ತಿದ್ದ ಉತ್ಪನ್ನಗಳಿಗೆ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ’ ಎಂದು ಹೇಳಿದ್ದಾರೆ.
ರೈತರ ಪರವಾದ ಸುಧಾರಣೆಗಳು ಅವರಿಗೆ ಆರ್ಥಿಕವಾಗಿ ಸಧೃಡಗೊಳ್ಳುವ ಹಾದಿಯನ್ನು ಸೃಷ್ಟಿಸಿವೆ. ಬಹುತೇಕ ಎಲ್ಲಾ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರವು ಹೆಚ್ಚಿಸಿದೆ ಎಂದು ನಖ್ವಿ ತಿಳಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ ₹11 ಕೋಟಿಗೂ ಹೆಚ್ಚು ರೈತರು ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ ಮೂಲಕ ₹2.40 ಲಕ್ಷ ಕೋಟಿ ರೈತರ ಖಾತೆಗಳಿಗೆ ಜಮಾವಣೆ ಮಾಡಲಾಗಿದೆ. ಸುಮಾರು 23 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.