ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪ್ರಮುಖ ನಾಯಕರ ಜೊತೆಗೆ ಚರ್ಚಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗೆ ವಿಶ್ವಾಸಾರ್ಹತೆ ಬರಬೇಕಾದರೆ ಮೊದಲು ಅಲ್ಲಿರುವ ‘ನಿಗ್ರಹ ಮತ್ತು ದಮನಕಾರಿ ಯುಗ’ಕ್ಕೆ ಅಂತ್ಯವಾಡಬೇಕಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
‘ಇದಕ್ಕೆ ಪೂರಕವಾಗಿ ವಿರೋಧದ ಧ್ವನಿಗಳು ಎಂದಿಗೂ ಕ್ರಿಮಿನಲ್ ಕೃತ್ಯವಲ್ಲ ಎಂದು ಅರಿತುಕೊಳ್ಳಬೇಕಾಗಿದೆ. ಜನರಿಗೆ ಮುಕ್ತವಾಗಿ ಉಸಿರಾಡುವ ವಾತಾವರಣ ನಿರ್ಮಿಸಿ, ಉಳಿದದ್ದು ತಂತಾನೆ ಆಗುತ್ತದೆ’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಮೆಹಬೂಬಾ ಪ್ರತಿಪಾದಿಸಿದರು.
ಈ ಮೊದಲು ರಾಜ್ಯವಾಗಿದ್ದು, ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಅಲ್ಲಿನ ಜನರ ನೋವುಗಳಿಗೆ ಅಂತ್ಯವಾಡುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ 14 ಸದಸ್ಯರ ನಿಯೋಗದ ಜೊತೆಗೆ ಚರ್ಚೆ ನಡೆಸುವ ಪ್ರಧಾನಿ ನಿರ್ಧಾರ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.
ಜನರಿಗೆ ಉಸಿರಾಡಲು ಅವಕಾಶ ನೀಡಿ ಎಂಬುದರ ಅರ್ಥ ಇಷ್ಟೇ. ಅಲ್ಲಿ ವಿರೋಧದ ಮಾತು ಆಡುವ ಯಾರನ್ನಾದರೂ ಬಂಧಿಸಲಾಗುತ್ತಿದೆ. ಕಾಶ್ಮೀರಿ ಸಲಹೆಗಾರರ ಮೇಲೆ ನಮಗೆ ವಿಶ್ವಾಸವಿದೆ ಎಂಬ ಭಾವನೆ ವ್ಯಕ್ತಪಡಿಸಿದರೂ ಬಂಧಿಸಲಾಗಿದೆ ಎಂದು ಮೆಹಬೂಬಾ ತಿಳಿಸಿದರು.