ನವದೆಹಲಿ: ಕೋವಿಡ್–19 ಎರಡನೇ ಅಲೆಯು ದೆಹಲಿಯಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವುದಾಗಿಯೂ ಹೇಳಿದ್ದಾರೆ.
'ಜುಲೈ 1ರಿಂದ ಆಗಸ್ಟ್ 17ರ ವರೆಗೂ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿದ್ದವು. ಸೆಪ್ಟೆಂಬರ್ 17ರಂದು ಕೋವಿಡ್ ದೃಢಪಟ್ಟ 4,500 ಹೊಸ ಪ್ರಕರಣಗಳು ದಾಖಲಾಗಿದ್ದು, ಈಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ತಜ್ಞರ ಪ್ರಕಾರ, ಕೊರೊನಾ ವೈರಸ್ ಎರಡನೇ ಅಲೆಯು ದೆಹಲಿಯಲ್ಲಿ ಗರಿಷ್ಠ ಮಟ್ಟದಲ್ಲಿದೆ ಹಾಗೂ ಮುಂದಿನ ದಿನಗಳಲ್ಲಿ ಪ್ರಮಾಣ ಇಳಿಕೆಯಾಗಿದೆ' ಎಂದು ಕೇಜ್ರಿವಾಲ್ ಹೇಳಿರುವುದಾಗಿ ವರದಿಯಾಗಿದೆ.
ನಿತ್ಯ ನಡೆಸಲಾಗುತ್ತಿರುವ ಕೋವಿಡ್–19 ಪರೀಕ್ಷೆಗಳ ಸಂಖ್ಯೆ 20,000ದಿಂದ 60,000ಕ್ಕೆ ಏರಿಕೆ ಮಾಡಲಾಗಿದೆ.
ಬುಧವಾರದವರೆಗೂ ದೆಹಲಿಯಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,56,789 ದಾಖಲಾಗಿದ್ದು, ಆ ಪೈಕಿ 2,20,866 ಮಂದಿ ಗುಣಮುಖರಾಗಿದ್ದಾರೆ ಹಾಗೂ 5,087 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕೋವಿಡ್ ದೃಢ ಪಟ್ಟ ಪ್ರಕರಣಗಳ ಸಂಖ್ಯೆ 4,000ಕ್ಕಿಂತ ಕಡಿಮೆ ವರದಿಯಾಗಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಲ್ಲ ಕೇಂದ್ರ ಸರ್ಕಾರ, ಎನ್ಜಿಒ ಹಾಗೂ ದೆಹಲಿ ಜನರ ಸಹಕಾರದೊಂದಿಗೆ ನಾವು ಅದನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದೇವೆ ಎಂದು ಕೇಜ್ರಿವಾಲ್ ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.