ನವದೆಹಲಿ: ಸೋಂಕಿತರ ಸಂಪರ್ಕಕ್ಕೆ ಒಳಗಾದ ಆರೋಗ್ಯ ಕಾರ್ಯಕರ್ತರ ಪತ್ತೆ ಮತ್ತು ಲಕ್ಷಣರಹಿತ ಸೋಂಕಿತರ ಸಂಪರ್ಕಕ್ಕೆ ಒಳಗಾಗಿರುವವರನ್ನು ಕ್ವಾರಂಟೈನ್ಗೆ ಒಳಪಡಿಸುವ ಪ್ರಕ್ರಿಯೆಯನ್ನು ಕೈಬಿಡಲು ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ಧರಿಸಿದೆ.
ಈಗಿನ ಕೋವಿಡ್–19 ಪರಿಸ್ಥಿತಿಯಿಂದಾಗಿ ಸಂಪನ್ಮೂಲ ಮತ್ತು ಸಿಬ್ಬಂದಿಯಲ್ಲಿ ಕೊರತೆ ಉಂಟಾಗಿದೆ. ಹಾಗಾಗಿ ಈ ಎರಡು ಪ್ರಕ್ರಿಯೆಗಳನ್ನು ಕೈಬಿಡುವ ನಿರ್ಧಾರವನ್ನು ಏಮ್ಸ್ ಕೈಗೊಂಡಿದೆ.
‘ಕೊರೊನಾ ರೋಗ ಲಕ್ಷಣಗಳನ್ನು ಹೊಂದಿರುವ ಆರೋಗ್ಯ ಕಾರ್ಯಕರ್ತರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುವುದು ಮತ್ತು ಕೋವಿಡ್ ದೃಢಪಟ್ಟ ಆರೋಗ್ಯ ಸಿಬ್ಬಂದಿಯನ್ನು ಮಾತ್ರ ಪ್ರತ್ಯೇಕ ವಾಸಕ್ಕೆ ಒಳಪಡಿಸಲಾಗವುದು’ ಎಂದು ಏಮ್ಸ್ ಹೇಳಿದೆ.
ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.