ನವದೆಹಲಿ: ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಹರಿಯಾಣ ಗಡಿ ಪ್ರದೇಶ ಸೇರಿದಂತೆ ದೇಶದ್ಯಾಂತ ರೈತ ಸಂಘಟನೆಗಳು ವ್ಯಾಪಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಜೊತೆಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ. ಈಗ ಮುಂದಿನ ಸುತ್ತಿನ ಮಾತುಕತೆಗಾಗಿ ಅನುಕೂಲಕರ ದಿನಾಂಕವನ್ನು ಆಯ್ಕೆ ಮಾಡುವಂತೆ ಸರ್ಕಾರವು ಭಾನುವಾರ ಪ್ರತಿಭಟನಾ ನಿರತ ರೈತ ಸಂಘಟನೆಗಳನ್ನು ಕೋರಿದೆ.
ಅಲ್ಲದೆ ಹೊಸ ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ತರಬೇಕಾದ ಅಂಶಗಳ ಬಗ್ಗೆ ಸ್ಪಷ್ಟವಾಗಿ ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ.
ಕೇಂದ್ರೀಯ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು 40 ರೈತ ಸಂಘಟನೆಯ ಮುಖಂಡರಿಗೆ ಪತ್ರವನ್ನು ಬರೆದಿದ್ದು, ರೈತರಿಗೆ ಎದ್ದಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರವು 'ಮುಕ್ತ ಮನಸ್ಸಿ'ನ ಮಾತುಕತೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದಿದ್ದಾರೆ.
ವಿವಾದತ್ಮಾಕ ಮೂರು ಕಾನೂನುಗಳನ್ನು ರದ್ದುಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ. ರೈತರು ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಟಿಕಾಣಿ ಹೂಡಿದ್ದು, ರೈತರ ಒಕ್ಕೂಟದ ನಡುವಣ ಐದು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ.
ಅಸ್ತಿತ್ವದಲ್ಲಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆ ಮುಂದುವರಿಯಲಿದೆ ಎಂದು ರೈತರಿಗೆ 'ಲಿಖಿತ ಭರವಸೆ' ನೀಡುವುದು ಸೇರಿದಂತೆ ಕನಿಷ್ಠ ಏಳು ವಿಷಯಗಳ ಬಗ್ಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಲು ಡಿಸೆಂಬರ್ 9ರಂದು ಕಳುಹಿಸಲಾದ ಕರಡು ಪ್ರಸ್ತಾವನೆಯಲ್ಲಿ ಸರ್ಕಾರ ಪ್ರಸ್ತಾಪಿಸಿದೆ ಎಂದು ಅಗರವಾಲ್ ಹೇಳಿದರು.
ಆದರೆ ಈ ಎಲ್ಲ ಪ್ರಸ್ತಾವನೆಗಳನ್ನು ರೈತ ಸಂಘಟನೆಗಳನ್ನು ನಿರಾಕರಿಸಿತ್ತು.
ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವ ರೈತ ಸಂಘಟನೆಯ ನಾಯಕರು ಕರಡು ಪ್ರಸ್ತಾವನೆಯಲ್ಲಿ ಉಳಿದಿರುವ ಆತಂಕ ಹಾಗೂ ಅನುಮಾನಗಳ ಬಗ್ಗೆ ವಿವರವನ್ನು ಒದಗಿಸಬೇಕು ಮತ್ತು ಮುಂದಿನ ಸುತ್ತಿನ ಮಾತುಕತೆಗೆ ಅನುಕೂಲವಾಗುವಂತೆ ದಿನಾಂಕವನ್ನು ಸೂಚಿಸಬೇಕು ಎಂದು ಅಗರವಾಲ್ ವಿನಂತಿಸಿದರು.
ಸಮಸ್ಯೆ ಇತ್ಯರ್ಥಗೊಳಿಸಲು ಮುಂದಿನ ಸಭೆಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಸಲು ಸರ್ಕಾರ ಉದ್ದೇಶಿಸಿದೆ. ಅಲ್ಲದೆ ಪ್ರತಿಭಟನೆಗಳು ಬೇಗನೇ ಕೊನೆಗೊಳ್ಳಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಸರ್ಕಾರವು ಇತರೆ ಹಲವಾರು ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಅವರ ಸಲಹೆಗಳನ್ನು ಕೋರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.