ನವದೆಹಲಿ: ‘ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಶನಿವಾರಕ್ಕೆ ಏಳು ತಿಂಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ’ ಎಂದು ದೆಹಲಿ ಪೊಲೀಸರು ತಿಳಿಸಿದರು.
‘ದೆಹಲಿ ಪೊಲೀಸರ ಮನವಿ ಮೇರೆಗೆ ಹಳದಿ ಮಾರ್ಗದ ಮೂರು ಮುಖ್ಯ ನಿಲ್ದಾಣಗಳಾದ ವಿಶ್ವವಿದ್ಯಾಲಯ, ಸಿವಿಲ್ ಲೈನ್ಸ್ ಮತ್ತು ವಿಧಾನಸಭಾ ನಿಲ್ದಾಣಗಳನ್ನು ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗಾಗಿ ಮುಚ್ಚಲಾಗುತ್ತದೆ’ ಎಂದು ದೆಹಲಿ ಮೆಟ್ರೊ ಶುಕ್ರವಾರವೇ ಟ್ವೀಟ್ ಮಾಡಿತ್ತು.
40 ರೈತರ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರೈತರ ಪ್ರತಿಭಟನೆ ಏಳು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂನ್ 26 ಅನ್ನು(ಶನಿವಾರ) ‘ಖೇತಿ ಬಚಾವೋ, ಲೋಕತಂತ್ರ ಬಚಾವೋ ದಿನ’ವನ್ನಾಗಿ (ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ) ಆಚರಿಸುವಂತೆ ಕರೆ ನೀಡಿತ್ತು.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಮೂರು ಗಡಿಗಳಾದ ಸಿಂಘು, ಗಾಜಿಪುರ ಮತ್ತು ಟಿಕ್ರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.