ಪುಣೆ: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಹಾರಾಷ್ಟ್ರದ ಅಹಮದ್ನಗರದ ರೈತರ ಗುಂಪೊಂದು ಪ್ರತಿಭಟನೆ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಚೆ ಮೂಲಕ ಸೋಮವಾರ ಈರುಳ್ಳಿಯನ್ನು ‘ಪಾರ್ಸೆಲ್’ ಕಳುಹಿಸಿದೆ.
‘ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಅಗತ್ಯ ಪರಿಹಾರ ಒದಗಿಸಬೇಕು. ಈರುಳ್ಳಿ ಹಾಗೂ ಇತರೆ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕು. ಪ್ರತಿ ಕ್ವಿಂಟಲ್ಗೆ ₹1 ಸಾವಿರ ಪರಿಹಾರ ಪ್ರಕಟಿಸಬೇಕು’ ಎಂದು ಶೇತ್ಕಾರಿ ಸಂಘಟನೆ ಹಾಗೂ ಶೇತ್ಕಾರಿ ವಿಕಾಸ್ ಮಂಡಳ ಒತ್ತಾಯಿಸಿವೆ.
‘ಕೇಂದ್ರ ಸರ್ಕಾರ ಕೂಡಲೇ ಈರುಳ್ಳಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕು. ಇದು ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ, ಕ್ವಿಂಟಲ್ಗೆ ತಲಾ ₹1,000 ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರ, ರೋಗನಿರೋಧಕ ಔಷಧ, ಪೆಟ್ರೋಲ್ ಮತ್ತು ಡೀಸೆಲ್ಗೆ ಜಾಗತಿಕ ಮಾರುಕಟ್ಎ ಬೆಲೆ ತೆರಬೇಕಿದೆ. ಆದರೆ, ನಮ್ಮ ಉತ್ಪನ್ನಗಳನ್ನು ಮಾತ್ರ ಭಾರತೀಯ ಮಾರುಕಟ್ಟೆ ದರಕ್ಕೆ ಮಾರಬೇಕೆ? ಎಂದು ರೈತರೊಬ್ಬರು ಪ್ರಶ್ನಿಸಿದ್ದಾರೆ.