ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸತತ ನಾಲ್ಕನೇ ದಿನವು ಹಿಮಪಾತ ಮುಂದುವರಿದಿದ್ದು, ಜಮ್ಮು–ಶ್ರೀನಗರದ ರಾಷ್ಟ್ರೀಯ ಹೆದ್ದಾರಿ, ಮೊಘಲ್ ರಸ್ತೆಯಲ್ಲಿ ಬುಧವಾರವೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ವಿಮಾನ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರದಿಂದ ಹಿಮಪಾತವಾಗುತ್ತಿದ್ದು, ಬುಧವಾರ ಹವಾಮಾನದಲ್ಲಿ ಸುಧಾರಣೆಯಾಗುವ ಸಾಧ್ಯತೆಯಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘ನಗರದ ಹಲವೆಡೆ ಭಾರೀ ಹಿಮಪಾತ ಮತ್ತು ಭೂ ಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಜಮ್ಮು– ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ’ ಎಂದು ಸಂಚಾರ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಜವಾಹರ್ ಸುರಂಗ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹಿಮ ತುಂಬಿಹೋಗಿದೆ. ಅಲ್ಲದೆಸಮ್ರೋಲಿ, ಮಾಗರ್ಕೋಟ್, ಪಂಥ್ಯಾಲ್, ಮಾರೊಗ್, ಕೆಫೆಟೇರಿಯಾ ಮೊರ್, ಧಲ್ವಾಸ್ ಮತ್ತು ನಶ್ರಿಗಳಲ್ಲಿ ಭೂ ಕುಸಿತಗಳು ಸಂಭವಿಸಿದೆ. ಹಾಗಾಗಿ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅವರು ಹೇಳಿದರು.
‘ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಅತಿ ಹೆಚ್ಚು ಹಿಮಪಾತವಾಗಿದೆ. ಅಲ್ಲದೆ ಅನಂತನಾಗ್ ಜಿಲ್ಲೆಯಲ್ಲೂ ಭಾರೀ ಹಿಮಪಾತವಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ಶ್ರೀನಗರ ವಿಮಾನ ನಿಲ್ದಾಣದಲ್ಲಿ, ಹಿಮಪಾತದಿಂದಾಗಿ ವಾಯುಮಾರ್ಗವು ಸ್ಷಷ್ಟವಾಗಿ ಗೋಚರಿಸುತ್ತಿಲ್ಲ. ಹಾಗಾಗಿ ವಿಮಾನ ಹಾರಾಟ ಸೇವೆಯನ್ನು ಸತತ ನಾಲ್ಕನೇ ದಿನವೂ ಸ್ಥಗಿತಗೊಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.