ನವದೆಹಲಿ (ಪಿಟಿಐ): ‘ಕೋರ್ಟ್ ಅಥವಾ ನ್ಯಾಯಮಂಡಳಿಯಿಂದ ಈಗಾಗಲೇ ತೀರ್ಮಾನವಾದ ವಿಷಯಗಳಿಗೆ ಸಂಬಂಧಿಸಿ ಜನರು ಮತ್ತೆ ಕೋರ್ಟ್ ಮೆಟ್ಟಿಲು ಏರುವಂತೆ ಮಾಡಬಾರದು. ರಾಷ್ಟ್ರೀಯ ಮೊಕದ್ದಮೆಗಳ ನೀತಿ (ಎನ್ಎಲ್ಪಿ) ಪಾಲಿಸಬೇಕು’ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
‘ವಿಷಯದಲ್ಲಿ ಸಾಮ್ಯತೆ ಇದ್ದು, ಈಗಾಗಲೇ ತೀರ್ಮಾನ ಆಗಿದ್ದರೆ, ಆದೇಶ ನಂತರದ ಅದೇ ಸ್ವರೂಪದ ಪ್ರಕರಣಗಳಿಗೂ ಅನ್ವಯವಾಗಲಿದೆ ಎಂಬ ಕೇಂದ್ರದ ರಾಷ್ಟ್ರೀಯ ಮೊಕದ್ದಮೆಗಳ ನೀತಿಯು (ಎನ್ಎಲ್ಪಿ) ಆಡಳಿತ ವ್ಯವಸ್ಥೆಯ ಗಮನದಲ್ಲಿರಬೇಕು’ ಎಂದು ಕೋರ್ಟ್ ತಿಳಿಸಿದೆ.
ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಜನರು ಮತ್ತೆ, ಮತ್ತೆ ಕೋರ್ಟ್ ಮೆಟ್ಟಿಲೇರುವಂತೆ ಮಾಡಬಾರದು. ಪುನರಾವರ್ತನೆ ತಪ್ಪಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠವು ಸ್ಪಷ್ಟ ನಿರ್ದೇಶನ ನೀಡಿತು.