ಇಂದೋರ್: ‘ಅಗತ್ಯಬಿದ್ದರೆ ರಾಜಸ್ಥಾನದಲ್ಲಿ ಪಕ್ಷವನ್ನು ಬಲಪಡಿಸಲು ‘ಕಠಿಣ ನಿರ್ಧಾರ’ ತೆಗೆದುಕೊಳ್ಳಲೂ ಹಿಂದಕ್ಕೆ ಸರಿಯುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆಯೇ ಮುಖ್ಯ’ ಎಂದು ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್ ಅವರು ತಿಳಿಸಿದರು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮತ್ತು ಅವರ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಸೆಣಸಾಟ ನಡೆಯುತ್ತಿರುವ ನಡುವೆಯೇ ಅವರು ಈ ಹೇಳಿಕೆ ನೀಡಿದರು.
ಭಾರತ ಜೋಡೊ ಯಾತ್ರೆ ವೇಳೆಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪಕ್ಷವೇ ನಮಗೆ ಅತ್ಯಂತ ಮುಖ್ಯ. ರಾಜಸ್ಥಾನದ ಆಂತರಿಕ ಕಲಹಕ್ಕೆ ಸಂಬಂಧಿಸಿದಂತೆ ಪಕ್ಷವನ್ನು ಬಲಪಡಿಸುವಂತಹ ನಿರ್ಧಾರ ಕೈಗೊಳ್ಳುತ್ತೇವೆ. ಅದು ಕಠಿಣ ನಿರ್ಧಾರವಾದರೂ ಸರಿಯೇ ಅಥವಾ ರಾಜೀ ಸಂಧಾನವಾದರೂ ಸರಿಯೇ’ ಎಂದು ತಿಳಿಸಿದರು.
‘ರಾಜಸ್ಥಾನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ನಾಯಕತ್ವ ಬಯಸಿದೆ. ಆದರೆ ಅದಕ್ಕೆ ನಾನು ಕಾಲಮಿತಿ ಹಾಕಲು ಸಾಧ್ಯವಿಲ್ಲ. ಪಕ್ಷದ ನಾಯಕತ್ವವೇ ಕಾಲಮಿತಿ ನಿರ್ಧರಿಸಲಿದೆ. ಕಾಂಗ್ರೆಸ್ಗೆ ಗೆಹಲೋತ್ ಮತ್ತು ಪೈಲಟ್ ಇಬ್ಬರೂ ಬೇಕು’ ಎಂದು ಹೇಳಿದರು.
ಭಾರತ ಜೋಡೊ ಯಾತ್ರೆಯು ಡಿ.4ರಂದು ರಾಜಸ್ಥಾನ ಪ್ರವೇಶಿಸಲಿದೆ.