ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಕ್ಕೆ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯ: ಪ್ರಧಾನಿ ಮೋದಿ

ನಾಲ್ಕು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲ ಸಾರ್ವಜನಿಕ ರಂಗದ ಉದ್ದಿಮೆ ಖಾಸಗೀಕರಣ
Last Updated 24 ಫೆಬ್ರುವರಿ 2021, 19:01 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗೀಕರಣವನ್ನು ಮತ್ತೊಮ್ಮೆ ಅತ್ಯಂತ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರವು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಯಾವ ಅಗತ್ಯವೂ ಇಲ್ಲ. ನಷ್ಟದಲ್ಲಿರುವ ಘಟಕಗಳನ್ನು ತೆರಿಗೆದಾರರ ಹಣದಲ್ಲಿ ಸಾಕಬೇಕಾಗಿಲ್ಲ. ಈ ಹಣವನ್ನು ಜನರ ಅಭಿವೃದ್ಧಿಗೆ ಬಳಸಬಹುದು ಎಂದು ಮೋದಿ ಹೇಳಿದ್ದಾರೆ. ರಕ್ಷಣೆ ಮತ್ತು ಇತರ ಮಹತ್ವದ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲದ ಉದ್ಯಮಗಳನ್ನು ಉದ್ದೇಶಿಸಿ ಅವರು ಹೀಗೆ ಹೇಳಿದ್ದಾರೆ.

‘ತೈಲ, ಅನಿಲ ಮತ್ತು ವಿದ್ಯುತ್ ಕ್ಷೇತ್ರದ ಸುಮಾರು ನೂರು ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗಿಯವರಿಗೆ ತೆರೆದಿಡಲಾಗುವುದು. ಇದರಿಂದ ₹2.5 ಲಕ್ಷ ಕೋಟಿ ಹೂಡಿಕೆಯ ಅವಕಾಶ ಖಾಸಗಿ ರಂಗಕ್ಕೆ ದೊರೆಯಲಿದೆ. ಉದ್ಯಮ ಮತ್ತು ವ್ಯಾಪಾರವನ್ನು ಬೆಂಬಲಿಸುವುದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರವೇ ಉದ್ಯಮಗಳ ಮಾಲೀಕತ್ವ ಹೊಂದಿವ ಅಗತ್ಯ ಇಲ್ಲ’ ಎಂದು ಮೋದಿ ಪ್ರತಿಪಾದಿಸಿದ್ದಾರೆ. 2021–22ನೇ ಸಾಲಿನ ಬಜೆಟ್‌ನಲ್ಲಿ ಖಾಸಗೀಕರಣದ ಧೋರಣೆ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಹೂಡಿಕೆ, ಜಾಗತಿಕ ಅತ್ಯುತ್ತಮ ಪದ್ಧತಿಗಳು, ಅತ್ಯುನ್ನತ ಗುಣಮಟ್ಟದ ವ್ಯವಸ್ಥಾಪಕರನ್ನುಖಾಸಗಿ ಕ್ಷೇತ್ರವು ತರುತ್ತದೆ. ನಿರ್ವಹಣೆ ಮತ್ತು ಆಧುನಿಕತೆಯಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಸರ್ಕಾರದ ಪಾಲು ಮಾರಾಟದ ಮೂಲಕ ಸಿಕ್ಕ ಹಣವನ್ನು ನೀರು ಮತ್ತು ನೈರ್ಮಲ್ಯ, ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಕ್ಷೇತ್ರಗಳಿಗೆ ವೆಚ್ಚ ಮಾಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಅತ್ಯಂತ ನಿರ್ಣಾಯಕವಾದ ಅಣು, ಇಂಧನ, ಬಾಹ್ಯಾಕಾಶ ಮತ್ತು ರಕ್ಷಣೆಗೆ ಸಂಬಂಧಿಸಿದ ನಾಲ್ಕು ಕ್ಷೇತ್ರಗಳನ್ನು ಬಿಟ್ಟು ಇನ್ನೆಲ್ಲ ಕ್ಷೇತ್ರಗಳ ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ವಿದ್ಯುತ್‌, ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳು, ಬ್ಯಾಂಕಿಂಗ್‌, ವಿಮೆ ಮತ್ತು ಹಣಕಾಸು ಸೇವಾ ಕ್ಷೇತ್ರದ ಉದ್ಯಮಗಳಲ್ಲಿ ಸರ್ಕಾರವು ಕನಿಷ್ಠ ಮಟ್ಟದ ಪಾಲನ್ನು ಮಾತ್ರ ಉಳಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಪಾಲು ಮಾರಾಟ ಪ್ರಕ್ರಿಯೆಗೆ ವೇಗ ತುಂಬಲು ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ ಎಂದು ಅ‌ವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT