ನವದಹಲಿ: ‘ಪೋಷಣ್ ಮಹಾ‘ ಅಭಿಯಾನದ ಮೂಲಕ ಮಕ್ಕಳಲ್ಲಿರುವ ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ‘ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಸರ್ಕಾರದ ಸಮಗ್ರ ಪೋಷಣಾ ಕಾರ್ಯಕ್ರಮ ‘ಪೋಷಣ್ ಮಹಾ‘ ಅಭಿಯಾನದ ಪ್ರಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಅವರು, ‘ನಾಗರಿಕರು ಪೌಷ್ಟಿಕಾಂಶಯುಕ್ತ ದೇಶೀಯ ಖಾದ್ಯಗಳನ್ನು ತಯಾರಿಸಿ, ಅವುಗಳ ರೆಸಿಪಿಯನ್ನು ಸರ್ಕಾರದ ಜತೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ದೇಶದ ಮೂಲೆ ಮೂಲೆಯಲ್ಲಿರುವ ದೇಸಿ ಆಹಾರ ಪದ್ಧತಿಯ ರೆಸಿಪಿಗಳನ್ನು ದಾಖಲಿಸುವ ಕೆಲಸ ಮಾಡುತ್ತಿದೆ ಎಂದು ನಡ್ಡಾ ಹೇಳಿದರು.
ಈ ಪ್ರಚಾರಾಂದೋಲನದ ಮೂಲಕ ಕೇಂದ್ರ ಸರ್ಕಾರ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಉಂಟಾಗುವ ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.