ನವದೆಹಲಿ: ಹರಿದ್ವಾರ ಧರ್ಮ ಸಂಸದ್ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿಗೆ ಸೆ.2ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ಈಹಿಂದೆ ವಾಸಿಂ ರಿಜ್ವಿ ಎಂದು ಕರೆಸಿಕೊಳ್ಳುತ್ತಿದ್ದ ತ್ಯಾಗಿ ಪ್ರಸ್ತುತ ವೈದ್ಯಕೀಯ ಜಾಮೀನಿನ ಮೇಲೆ ಹೊರಗಿದ್ದಾರೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಬಿ.ವಿ.ನಾಗರತ್ನ ಅವರಿದ್ದ ಪೀಠವು, ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಮಂಜೂರು ಮಾಡಿದ್ದ ಜಾಮೀನು ವಿಸ್ತರಿಸಲು ನಿರಾಕರಿಸಿ, ಸೆ.9 ರಂದು ತ್ಯಾಗಿ ಸಲ್ಲಿಸಿರುವ ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.
‘ಆತನಿಗೆ ಪರಿಹಾರ ನೀಡಲು ಯಾವುದೇ ಕಾರಣವಿಲ್ಲ. ಈತನ ವಿರುದ್ಧ ಹಲವು ಪ್ರಕರಣಗಳು ಬಾಕಿ ಇವೆ. ಶರಣಾಗುವಂತೆ ಹೇಳಿ’ ಎಂದು ಪೀಠವುತ್ಯಾಗಿ ಪರ ವಕೀಲರಿಗೆ ಹೇಳಿದೆ.
ವೈದ್ಯಕೀಯ ಕಾರಣಕ್ಕಾಗಿ ಮೇ 17ರಂದು ತ್ಯಾಗಿಗೆ ಮಧ್ಯಂತ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂ ಕೋರ್ಟ್, ದ್ವೇಷ ಭಾಷಣ ಮಾಡದಂತೆ, ವಿದ್ಯುನ್ಮಾನ, ಡಿಜಿಟಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೇಳಿಕೆ ನೀಡದಂತೆ ನಿಬಂಧನೆ ವಿಧಿಸಿತ್ತು.