ನವದಹಲಿ: ಕೋವಿಡ್–19 ಲಸಿಕೆಯನ್ನು ರಫ್ತು ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಫ್ತು ಮಾಡಲಾಗುತ್ತಿರುವ ಲಸಿಕೆಯ ಡೋಸ್ಗಳನ್ನು ದೇಶದ ಜನರಿಗೆ ಮೊದಲು ನೀಡಿದ್ದರೆ ಹೆಚ್ಚಿನ ಸಂಖ್ಯೆಯ ಜೀವಗಳನ್ನು ಉಳಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.
ನಮ್ಮ ದೇಶದ ಜನರು ಸಾಯುತ್ತಿರುವಾಗ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರವು ಲಸಿಕೆಯನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದು ಗಂಭೀರ ಅಪರಾಧ ಎಂದು ಅವರು ಹೇಳಿದ್ದಾರೆ.
ಪತ್ರಿಕೆಗಳ ವರದಿ ಉಲ್ಲೇಖಿಸಿ ಆನ್ಲೈನ್ ಮೂಲಕ ಮಾತನಾಡಿದ ಅವರು, ‘ಕೇಂದ್ರವು 93 ದೇಶಗಳಿಗೆ ಲಸಿಕೆ ಮಾರಾಟ ಮಾಡಿದ್ದು, ಆ ಪೈಕಿ ಶೇ 60ರಷ್ಟು ದೇಶಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಜತೆಗೆ ಆ ದೇಶಗಳಲ್ಲಿ ಸಾವಿನ ಭೀತಿಯೂ ಕಡಿಮೆ ಇದೆ’ ಎಂದು ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆಗೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮೃತಪಟ್ಟಿದ್ದಾರೆ. ಲಸಿಕೆಯನ್ನು ರಫ್ತು ಮಾಡುವ ಬದಲು ಈ ಯುವಕರಿಗೆ ನೀಡಿದ್ದರೆ ಅವರ ಜೀವ ಉಳಿಸಬಹುದಿತ್ತು ಎಂದು ಸಿಸೋಡಿಯಾ ಹೇಳಿದ್ದಾರೆ.