ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಾಜೌರಿಯಲ್ಲಿ ಭಾರಿ ಸ್ಪೋಟಕ ವಸ್ತುಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಿ, ನಿಷ್ಕ್ರಿಯಗೊಳಿಸಿದ್ದರಿಂದ ಸಂಭವಿಸಬಹುದಾಗಿದ್ದ ಬಹು ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು–ರಾಜೌರಿ ರಾಷ್ಟ್ರೀಯ ಹೆದ್ದಾರಿ ಬಥೂನಿ–ಡಿಲೊಗ್ರಾಮದ ಸೇತುವೆ ಕೆಳಗಡೆ ಸುಧಾರಿತ ಸ್ಪೋಟಕವನ್ನು ಭದ್ರತಾ ಪಡೆಗಳು ಪತ್ತೆ ಮಾಡಿದ್ದವು. ನಂತರ ಸೇನಾಪಡೆಯ ಬಾಂಬ್ ನಿಷ್ಕ್ರಿಯ ದಳದವರು ಬೆಳಿಗ್ಗೆ 9.10ರ ಸುಮಾರಿಗೆ ಅದನ್ನು ನಿಷ್ಕ್ರಿಯಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾದ ಸ್ಫೋಟಕವನ್ನು ರಸ್ತೆಯ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಯಾವುದೇ ಹಾನಿಯಾಗದಂತೆ ನಿಷ್ಕ್ರಿಯಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಪೋಟಕ ಪತ್ತೆಯಾದ ನಂತರ, ಆ ರಸ್ತೆಯಲ್ಲಿ ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಲಾಯಿತು.
ಭಯೋತ್ಪಾದಕರು, ಮಧ್ಯರಾತ್ರಿ ವೇಳೆ ಸ್ಫೋಟಕಗಳನ್ನು ಸೇತುವೆ ಕೆಳಗೆ ಇರಿಸಿರಬಹುದು. ಸ್ಫೋಟದ ಸಂಚು ರೂಸಿರುವ ಭಯೋತ್ಪಾದಕರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.